"ಕೊರೊನಾ ಸೋಂಕಿನಿಂದ ಗುಣಮುಖವಾಗಲು ಆಯುರ್ವೇದ ಕಾರಣವಾಯಿತು"
ಶಿವಮೊಗ್ಗ, ಜೂನ್ 20: ಕೊರೊನಾ ಸೋಂಕಿಗೆ ತುತ್ತಾಗಿದ್ದ ಸ್ವಾಮೀಜಿ ವಿನಯಾನಂದ ಸರಸ್ವತಿ ಅವರು ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈ ಸೋಂಕಿನಿಂದ ಗುಣಮುಖವಾಗಲು ಆಯುರ್ವೇದ ಚಿಕಿತ್ಸಾ ಪದ್ಧತಿ ಅನುಸರಣೆ ಕಾರಣ ಎಂದಿದ್ದಾರೆ.
Recommended Video
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿರುವ ಅವರು, ನಾನು ಬಾಲ್ಯದಿಂದಲೂ ಆಯುರ್ವೇದ ಪದ್ಧತಿ ಅನುಸರಿಸುತ್ತಿದ್ದೇನೆ. ಆಯುರ್ವೇದದ ಮೇಲೆ ಅತೀವ ವಿಶ್ವಾಸವಿದೆ. ಈ ಕಾರಣದಿಂದಾಗಿ ನನಗೆ ಕೊರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆಯನ್ನು ಕೊಡಿಸಿ ಎಂದು ಪ್ರಧಾನಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆ. ಮೊದಲು ಮನವಿಯನ್ನು ತಿರಸ್ಕರಿಸಿದ್ದರು. ನಂತರ ಆಯುರ್ವೇದ ಚಿಕಿತ್ಸೆಗೆ ಅನುಮತಿ ದೊರೆಯಿತು" ಎಂದು ತಿಳಿಸಿದರು.
ಕೊರೊನಾ ಸೋಂಕಿತ ಸ್ವಾಮೀಜಿಗೆ ಆಯುರ್ವೇದ ಚಿಕಿತ್ಸೆ ಕೊಡಿಸಲು ಶಿವಮೊಗ್ಗ ಜಿಲ್ಲಾಡಳಿತ ಸಮ್ಮತಿ
"ಆಯುರ್ವೇದ ಚಿಕಿತ್ಸೆ ಪಡೆಯುವುದು ನಮ್ಮ ಹಕ್ಕು. ನನಗೆ ಆಯುಷ್ ಇಲಾಖೆಯ ಹಿರಿಯ ವೈದ್ಯ ಡಾ.ಸಿ.ಎ ಹೀರೆಮಠ್ ಅವರಿಗೆ, ಜಿಲ್ಲಾಡಳಿತ, ಎಲ್ಲಾ ವೈದ್ಯರು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಆಯುರ್ವೇದ ಪದ್ಧತಿಯ ಅನುಸರಣೆಯಿಂದ ನಾನು ಬೇಗ ಗುಣಮುಖರಾಗಲು ಸಾಧ್ಯವಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ ನೀಡಿದ್ದಕ್ಕೆ ಶಿವಮೊಗ್ಗ ಸಾಕ್ಷಿಯಾಗಿದೆ ಎಂದು ತಿಳಿಸಿದರು.