ಕುಮಾರಸ್ವಾಮಿ ಕಣ್ಣೀರಿನಿಂದ ಮರುಕ ಹುಟ್ಟುವುದಿಲ್ಲ: ಆಯನೂರು ಮಂಜುನಾಥ್
ಶಿವಮೊಗ್ಗ, ಜುಲೈ.16: ರಾಜ್ಯದೆಲ್ಲೆಡೆ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಇದರ ಮಧ್ಯೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಧಾರಾಕಾರವಾಗಿ ಕಣ್ಣೀರಧಾರೆ ಹರಿಸತೊಡಗಿದ್ದಾರೆ. ಆದರೆ ಅವರ ಕಣ್ಣೀರಧಾರೆ ನೋಡಿ ಯಾರಿಗೂ ಮರುಕ ಹುಟ್ಟುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಲೇವಡಿ ಮಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಬಯಸಿದಾಗ ಕಣ್ಣೀರಧಾರೆ ಹರಿಸುತ್ತಾರೆ. ಕುಮಾರಸ್ವಾಮಿ ಹರಿಸಿರುವ ಕಣ್ಣೀರಿನ ಹಿಂದೆ ಜನತೆಗೆ ರಾಜಕೀಯ ಸಂದೇಶ ರವಾನಿಸುವ ಉದ್ದೇಶ ಹೊಂದಿದ್ದಾರೆ.
ಕುಮಾರಸ್ವಾಮಿ ಈಗ ಉತ್ತರ ಕುಮಾರ: ಆಯನೂರು ಮಂಜುನಾಥ್
ಕಾಂಗ್ರೆಸ್ ನಿಂದ ತನಗೆ ಅಡಚಣೆ ಉಂಟಾಗುತ್ತಿದೆ. ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ವೈಫಲ್ಯತೆಗೆ ಕಾಂಗ್ರೆಸ್ ಕಾರಣ ಎಂಬ ರಾಜಕೀಯ ಸಂದೇಶ ನೀಡುವ ಪ್ರಯತ್ನ ನಡೆಸಿದ್ದಾರೆ. ಆತಂಕಗೊಂಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹರಿಸುವುದಕ್ಕೆ ಕಾಂಗ್ರೆಸ್ ಕಾರಣ ಅಲ್ಲ ಎಂಬ ಹೇಳಿಕೆ ನೀಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಪ್ರತಿಷ್ಠೆಗಾಗಿ ಬಜೆಟ್ ಮಂಡಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಸಾಕಷ್ಟು ಭರವಸೆಗಳನ್ನು ಜೆಡಿಎಸ್ ನೀಡಿತ್ತು. ಆದರೆ ಯಾವುದೇ ಭರವಸೆ ಈಡೇರುವ ಲಕ್ಷಣ ಇಲ್ಲ. ಅತಿಥಿ ಶಿಕ್ಷಕರು, ಎನ್ಪಿಎಸ್ ನೌಕರರು, ಕಾರ್ಮಿಕರು, ಬಡವರ ಬಗ್ಗೆ ಬಜೆಟ್ ನಲ್ಲಿ ಯಾವುದೇ ಅಂಶ ಪ್ರಕಟಿಸಿಲ್ಲ ಎಂದು ಆರೋಪಿಸಿದರು.
ಸಾಂದರ್ಭಿಕವಾಗಿ ಜನಿಸಿದ ಶಿಶುವಿನ ಆಡಳಿತದಲ್ಲಿ ರಾಜ್ಯದ ಜನತೆ ಸಂಪೂರ್ಣ ಅನಾಥರಾಗಿದ್ದಾರೆ. ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಬೇಕು ಎಂಬ ನೆಪದಲ್ಲಿ ಕಾಂಗ್ರೆಸ್ ನೊಂದಿಗೆ ಶುಷ್ಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಇದರ ಪರಿಣಾಮ ರಾಜ್ಯದ ಜನತೆ ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.
ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಆಡಳಿತ ನೀಡುವ ಬಗ್ಗೆ ಸಂಶಯವಿದೆ. ಬಲವಂತದಿಂದ ಅಧಿಕಾರ ನಡೆಸುತ್ತಿರುವ ಸರ್ಕಾರ ಹೆಚ್ಚೆಂದರೆ ಲೋಕಸಭಾ ಚುನಾವಣೆವರೆಗೂ ಇರಬಹುದು ಇಲ್ಲವೇ ಅದಕ್ಕೂ ಮೊದಲೇ ಬಿದ್ದು ಹೋದರೂ ಆಶ್ಚರ್ಯವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ದತ್ತಾತ್ರಿ, ಎನ್.ಜೆ.ರಾಜಶೇಖರ್, ಕೆ.ಜಿ.ಕುಮಾರಸ್ವಾಮಿ,ಮಧುಸೂದನ್, ಅನಿತಾ ರವಿಶಂಕರ್, ರತ್ನಾಕರ ಶೆಣೈ ಮತ್ತಿತರರು ಇದ್ದರು.