ಶಿವಮೊಗ್ಗ; ಸಾಮೂಹಿಕ ವಿವಾಹದಲ್ಲಿ ನಡೆದ ಆಯನೂರು ಮಂಜುನಾಥ ಪುತ್ರಿ ಮದುವೆ
ಶಿವಮೊಗ್ಗ, ಜನವರಿ 31: ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳ ಮದುವೆ ಅದ್ಧೂರಿಯಾಗಿ ನಡೆಯುತ್ತದೆ. ಆದರೆ ಶಿವಮೊಗ್ಗದ ಚಿರಪರಿತ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರು ತಮ್ಮ ಮಗಳ ವಿವಾಹವನ್ನು ನಿನ್ನೆ ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದರು.
ಆಯನೂರು ಮಂಜುನಾಥ ಅವರ ಮಗಳಾದ ಶಮಾತ್ಮಿಕ ಅವರ ವಿವಾಹ ನಿನ್ನೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 51 ಜೋಡಿಗಳ ನಡುವೆ ನೆರವೇರಿತು. ನಗರದ ಹೊರವಲಯದಲ್ಲಿರುವ ಪೆಸಿಟ್ ಕಾಲೇಜಿನ ಪ್ರೇರಣಾ ಹಾಲ್ ಕನ್ವೆನ್ಷನ್ ಹಾಲ್ ನಲ್ಲಿ ಆಯನೂರು ಧರ್ಮಶ್ರೀ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ವಿವಾಹದಲ್ಲಿ 51 ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಅವರ ಜೊತೆ ಶಮಾತ್ಮಿಕಾ ಮಹೇಂದ್ರ ಅವರ ಮದುವೆಯೂ ನೆರವೇರಿತು.
ಸಾಮೂಹಿಕ ವಿವಾಹದಲ್ಲಿ ಆಯನೂರು ಮಂಜುನಾಥ್ ಪುತ್ರಿ ವಿವಾಹ
51 ಜೋಡಿಗಳಿಗೆ, ಅವರ ತಂದೆ ತಾಯಿಗಳಿಗೆ ಬಟ್ಟೆ, ವಧುವಿಗೆ ಕಾಲುಂಗುರ, ತಾಳಿಯನ್ನು ಧರ್ಮಶ್ರೀ ಟ್ರಸ್ಟ್ ವತಿಯಿಂದ ನೀಡಲಾಯಿತು. ಮದುವೆಗೆ ಬುಧವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಿ ಶುಭ ಕೋರಿದ್ದರು. ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳು ಸೇರಿದಂತೆ ಇತರೆ ಸ್ವಾಮಿಗಳು ನವದಂಪತಿಗಳಿಗೆ ಆಶೀರ್ವದಿಸಿದರು. ದಾವಣಗೆರೆ, ತುಮಕೂರು, ಕುಂದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ವಧುವರರ ಪರವಾಗಿ ಸಾವಿರಾರು ಜನರು ಆಗಮಿಸಿದ್ದರು.