ಕೊರೊನಾ ಆತಂಕವಲ್ಲ; 200ರ ಗಡಿ ದಾಟಿದ ಮಂಗನ ಕಾಯಿಲೆ ಸಂಖ್ಯೆ
ಶಿವಮೊಗ್ಗ, ಏಪ್ರಿಲ್ 14 : ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಆತಂಕ ಹುಟ್ಟು ಹಾಕಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಭೀತಿ ಇಲ್ಲ ಆದರೆ, ಮಂಗನ ಕಾಯಿಲೆ ವೇಗವಾಗಿ ಹಬ್ಬುತ್ತಿದೆ.
ಮಂಗನ ಕಾಯಿಲೆ (ಕೆಎಫ್ಡಿ) ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಮಂಗನ ಕಾಯಿಲೆ ಪ್ರಕರಣ ದಾಖಲಾಗುತ್ತಿತ್ತು. ಈಗ ರಾಜ್ಯದ 12 ಜಿಲ್ಲೆಗಳಲ್ಲಿ, ದೇಶದ ನಾಲ್ಕು ರಾಜ್ಯಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.
ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಯಿಲೆಗೆ ಕೆಎಫ್ಡಿ ಎಂದು ಹೆಸರಿಡಲಾಯಿತು. ಈಗ ಈ ಕಾಯಿಲೆ ಶಿವಮೊಗ್ಗ ಜಿಲ್ಲೆಯ ಗಡಿಯನ್ನು ದಾಟಿದೆ. ಮಲೆನಾಡಿನ ಜನರನ್ನು ಈ ಕಾಯಿಲೆ ಕಾಡುತ್ತಿದೆ.
ಕಾಡಿನಲ್ಲಿ ಮಂಗಗಳು ಸತ್ತರೆ ಅದರಲ್ಲಿ ಉತ್ಪತ್ತಿಯಾಗುವ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಈ ಕಾಯಿಲೆ ಬರುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಇದು ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದು ಈ ಕಾಯಿಲೆ ಮುನ್ಸೂಚನೆ. ಮಂಗಗಳಿಂದ ಬರುವುದರಿಂದ ಮಂಗನ ಕಾಯಿಲೆ ಎಂದು ಹೇಳುತ್ತಾರೆ.
ಮಂಗನಕಾಯಿಲೆ ಈಗ ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಕಾಣಿಸಿಕೊಂಡಿದೆ. ಕೇರಳದ ವಯನಾಡು, ಮಲಪ್ಪುರಂ ಭಾಗದಲ್ಲಿಯೂ ಈ ಪ್ರಕರಣಗಳು ವರದಿಯಾಗಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಈಗ ಕೊರೊನಾ ಕಾರಣದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಹೊರ ಜಿಲ್ಲೆಗಳಲ್ಲಿ ನೆಲೆಸಿದ್ದ ಹಲವು ಜನರು ಮಲೆನಾಡಿಗೆ ಮರಳಿದ್ದಾರೆ. ಅವರು ಮನೆಯಲ್ಲಿ ಉಳಿಯದೇ ಕಾಡನ್ನು ಸುತ್ತುತ್ತಿದ್ದಾರೆ. ಆದ್ದರಿಂದ, ಕಾಯಿಲೆ ಹೆಚ್ಚಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಮಂಗನಕಾಯಿಲೆಗೆ 18 ವರ್ಷದ ಯುವತಿ ಬಲಿ
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗನಕಾಯಿಲೆ ನಿಯಂತ್ರಣ ಮಾಡುವ ಕುರಿತು ಬೆಂಗಳೂರಿನಲ್ಲಿ ಏಪ್ರಿಲ್ 15ರ ಬುಧವಾರ ಸಭೆ ಕರೆಯಲಾಗಿದೆ. ಶಿವಮೊಗ್ಗದಲ್ಲಿ 146, ಉತ್ತರ ಕನ್ನಡದಲ್ಲಿ 41 ಮತ್ತು ಚಿಕ್ಕಮಗಳೂರಿನಲ್ಲಿ 10 ಮಂಗನಕಾಯಿಲೆ ಪ್ರಕರಣಗಳು ದೃಢಪಟ್ಟಿವೆ.