ಪೊಲೀಸ್ ಪೇದೆ ಮೇಲೆ ಹಲ್ಲೆಗೂಂಡಾಗಳ ವಿರುದ್ಧ ಕ್ರಮಕ್ಕೆ ಬದ್ಧ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಜೂ22: ಕೆಲ ಮುಸ್ಲಿಂ ಗೂಂಡಾಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು ಅಮಾನವೀಯವಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮನವಿ ಮಾಡಲಾಗುವುದೆಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ದುಷ್ಕರ್ಮಿಯಿಂದ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇದೆ ಗುರುನಾಯ್ಕ ಅವರನ್ನು ಬುಧವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಾಂಜಾ ಹಾಗೂ ರಾಬರಿ ಮಾಡುತ್ತಿರುವವರ ಮೇಲೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಿದೆ ಎಂದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಗಳನ್ನು ಹಿಡಿಯಲು ತೆರಳಿದ ಪೊಲೀಸರಿಗೆ ಚಾಕುವಿನಿಂದ ಇರಿಯುತ್ತಾರೆಂದರೆ ಇವರ ಅಟ್ಟಹಾಸ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಾಗುತ್ತದೆ. ಕೆಲ ಮುಸ್ಲಿಂ ಗೂಂಡಾಗಳು ಶಿವಮೊಗ್ಗ ಶಾಂತಿಯಿಂದ ಇರಲು ಬಿಡುತ್ತಿಲ್ಲ. ಇವರ ಉದ್ದೇಶ ಏನೆಂದು ಇವರ ಕೃತ್ಯಗಳಿಂದಲೇ ಸ್ಪಷ್ಟವಾಗುತ್ತಿದೆ ಎಂದರು.
ಪರಾರಿಯಾಗಿದ್ದ ಆರೋಪಿ ಕಾಲಿಗೆ ಗುಂಡು-ಬಂಧನ
ಚಾಕು ಚುಚ್ಚಿ ಪರಾರಿಯಾದ ದೊಡ್ಡಪೇಟೆ ಠಾಣೆಯ ಕ್ರೈಮ್ ವಿಭಾಗದ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಅವರು ಶಾಹೀದ್ ಖುರೇಶಿ ಬಂಧಿಸಲು ತೆರಳಿದ್ದರು. ಆಗ ಆರೋಪಿ ತನ್ನ ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ. ನಮ್ಮ ಸಿಬ್ಬಂದಿ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ದಾಳಿ ಮಾಡಿದ್ದಾನೆ. ಸಿಬ್ಬಂದಿ ರಮೇಶ್ ಅವರ ಎಡಗೈಗೆ ಹಲ್ಲೆ ಮಾಡಿದ್ದಾನೆ. ಆಗ ಗುರುನಾಯಕ್ ಅವರು ಆರೋಪಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಅವರ ಎದೆಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಂಬಂಧ ಶಾಹಿದ್ ಖುರೇಶಿ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಮೂರು ರಾಬರಿ ಪ್ರಕರಣ ಭಾಗಿಯಾಗಿದ್ದ ಆರೋಪಿ ಶಾಹಿದ್
ಪೊಲೀಸ್ ಸಿಬ್ಬಂದಿಯೊಬ್ಬರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿ ಕೆಲವೇ ಗಂಟೆಯಲ್ಲಿ ಪತ್ತೆ ಹಚ್ಚಿ ಆತನ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ರಾಬರಿ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಲಗಾಲಿನ ಮಂಡಿಯ ಕೆಳಗೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾರಿದು ಶಾಹಿದ್ ಖುರೇಷಿ?
ಶಾಹಿದ್ ಖುರೇಶಿ, ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ರಾಬರಿ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಕಳೆದ ತಿಂಗಳು ಖುರೇಶಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿತ್ತು. ಮೇ 5ರಂದು ಆರ್.ಎಂ.ಎಲ್ ನಗರದಲ್ಲಿ ಸದ್ದಾಂ ಹುಸೇನ್ ಎಂಬುವವರನ್ನು ಖುರೀಷಿ ಮತ್ತು ಆತನ ಇಬ್ಬರು ಸಹಚರರು ಅಡ್ಡಗಟ್ಟಿ ಬೆದರಿಕೆ ಒಡ್ಡಿ 8 ಸಾವಿರ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಶಾಹಿದ್ ಖುರೇಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.