ಅಡಿಕೆ ಪಾಲಿಗೆ ಕೊಳೆ ರೋಗಕ್ಕೆ ಮಳೆ ಜೊತೆಯಾಗಿದೆ
ತೀರ್ಥಹಳ್ಳಿ, ಆಗಸ್ಟ್ 27: ಅಡಿಕೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ತೀರ್ಥಹಳ್ಳಿ ಸುತ್ತಮುತ್ತ, ಕೊಪ್ಪ, ಶೃಂಗೇರಿ, ಸಾಗರ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡು, ರೈತರು ಆತಂಕದಲ್ಲಿದ್ದಾರೆ. ಒಂದು ಕಡೆ ಔಷಧಿ ಹೊಡೆಯುವುದಕ್ಕೆ ಆಳುಗಳು ಸಿಗುತ್ತಿಲ್ಲ. ಮತ್ತೊಂದು ಕಡೆ ಮಳೆಯ ಕಾರಣಕ್ಕೆ ಔಷಧಿ ಹೊಡೆಯಲು ಆಗುತ್ತಿಲ್ಲ.
ಅದರಲ್ಲೂ ಸಣ್ಣ-ಪುಟ್ಟ ರೈತರಂತೂ ಈ ಬಾರಿ ಜಮೀನಿನಲ್ಲಿ ಅಡಿಕೆ ಮರ ಉಳಿಸಿಕೊಳ್ಳುವುದೇ ಕಷ್ಟ ಎಂಬಂತಾಗಿದೆ. ದೊಡ್ಡ ಪ್ರಮಾಣದಲ್ಲಿ ಜಮೀನಿರುವವರ ಬಳಿ ಕಾಯಂ ಆಳುಗಳು ಇರುತ್ತಾರೆ. ಆ ಆಳುಗಳು ಸಹ ತಮ್ಮ ಕಷ್ಟಕ್ಕೆ, ಮದುವೆಗೆ ಮತ್ತೊಂದಕ್ಕೆ ಹಣ ಪಡೆದಿರುತ್ತಾರೆ. ಅ ಋಣಕ್ಕಾದರೂ ಕೆಲಸಕ್ಕೆ ಬರುತ್ತಾರೆ. 20-30 ಗುಂಟೆಯಷ್ಟೆ ಜಮೀನಿರುವವರು ಸಾವಿರಾರು ರೂಪಾಯಿ ಮುಂಗಡ ನೀಡುವಷ್ಟು ಸ್ಥಿತಿವಂತರಿರುವುದಿಲ್ಲ. ಸಮಯಕ್ಕೆ ಔಷಧಿ ಹೊಡೆಯುವಂಥವರೂ ಸಿಗುವುದಿಲ್ಲ. ಅವರ ಸ್ಥಿತಿ ಚಿಂತಾಜನಕವಾಗಿದೆ.[ಅಡಿಕೆ ಧಾರಣೆ ಪಾತಾಳಕ್ಕೆ, ಕಂಗೆಟ್ಟ ಬೆಳೆಗಾರ]
ವಾತಾವರಣ ಸೂಕ್ಷ್ಮ: ಸಾಧಾರಣವಾಗಿ ಆಗಸ್ಟ್ ವೇಳೆಗೆ ಅಡಿಕೆಗೆ ಔಷಧಿ ಹೊಡೆಯುವುದಕ್ಕೆ ಆರಂಭಿಸುತ್ತಾರೆ. ಇಪ್ಪತ್ತೈದರಿಂದ ಮೂವತ್ತು ದಿನಕ್ಕೆ ಒಂದಾವರ್ತಿ ಔಷಧಿ ಹೊಡೆಯಲಾಗುತ್ತದೆ. ಈ ತಿಂಗಳ ಹವಾಮಾನ ತುಂಬ ಸೂಕ್ಷ್ಮವಾದ್ದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಬರೀ ಫಸಲಷ್ಟೆ ಅಲ್ಲ, ಅಡಿಕೆ ಮರ ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ.
ಇಂಥ ಸನ್ನಿವೇಶದಲ್ಲೇ ಬೆಳೆಗಾರರಿಗೆ ಖರ್ಚು ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಎಕರೆಗೆ ಎರಡರಿಂದ ಮೂರು ಡ್ರಮ್ ಅಂದರೆ ಡ್ರಮ್ ಗೆ 200 ಲೀಟರ್ ನಂತೆ ಔಷಧಿ ಹೊಡೆಯುತ್ತಾರೆ. ಈ ಪ್ರಮಾಣ ಕೂಡ ಅಡಿಕೆ ಕೊನೆಗಳು ಎಷ್ಟಿರುತ್ತವೆ, ಎಷ್ಟು ಫಲವತ್ತಾಗಿದೆ ಜಮೀನು ಎಂಬುದರ ಆಧಾರದ ಮೇಲೆ ನಿಂತಿರುತ್ತದೆ.[ಕೇಂದ್ರದಿಂದ ವಾರಾಂತ್ಯದೊಳಗೆ ಅಡಿಕೆಗೆ ಬೆಂಬಲ ಬೆಲೆ ನಿಗದಿ]
ಔಷಧಿಗೆ ಎಷ್ಟು ಖರ್ಚು?:200 ಲೀಟರ್ ಔಷಧಿ ತಯಾರಿಗೆ ಎಷ್ಟು ಖರ್ಚಾಗುತ್ತದೆ ಅಂದರೆ, ಔಷಧಿ ಹೊಡೆಯುವವನಿಗೆ ಒಂದು ಡ್ರಮ್ ಗೆ ಐನೂರರಿಂದ ಆರು ನೂರು ರುಪಾಯಿ, ಗಟರ್ ಮಿಷನ್ ಗ್ಯಾಸು ಮಾಡಿದವನಿಗೆ ನಾಲ್ಕನೂರರಿಂದ ಐನೂರು ಕೂಲಿ, ಇನ್ನು ಔಷಧಿ ತಯಾರಿಗೆ ಮಾತ್ರ ತುತ್ತ, ಸುಣ್ಣ, ಗಂಜಿ ಎಲ್ಲ ಸೇರಿ 1500-1700 ರುಪಾಯಿ ಆಗುತ್ತದೆ.
ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡರೂ ಮಳೆ ಬರುತ್ತಲೇ ಇದ್ದರೆ ಔಷಧಿ ಹೊಡೆಯುವುದು ಕಷ್ಟ. ಎಷ್ಟೆಲ್ಲ ಜೋಪಾನ ಮಾಡಿ ಕಾಪಿಟ್ಟುಕೊಂಡರೂ ಅಡಿಕೆಗೆ ಬೆಲೆ ಬರುತ್ತಾ ಎಂದು ನೋಡಿದರೆ ಅದರಲ್ಲೂ ಅನಿಶ್ಚಿತತೆ. ಸದ್ಯಕ್ಕೆ ಒಳ್ಳೆ ಕ್ವಾಲಿಟಿಯ ಹಸ ಅಡಿಕೆ ಬೆಲೆ 30 ಸಾವಿರದ ಆಸುಪಾಸಿನಲ್ಲಿದೆ. ಇನ್ನು ಬೆಟ್ಟೆಗೆ 24ರಿಂದ 26 ಸಾವಿರ, ಗೊರಬಲು 12ರಿಂದ 13 ಸಾವಿರ, ಇಡಿ ಅಡಿಕೆಗೆ 20 ಸಾವಿರದ ಹತ್ತಿರ ಹತ್ತಿರ ಬೆಲೆ ಇದೆ.[ಅಡಿಕೆ, ತೆಂಗು ಬೆಳೆಗಾರರ ಹಿತ ಕಾಯಲು ಮತ್ತೊಮ್ಮೆ ಕೇಂದ್ರಕ್ಕೆ ಮನವಿ]
ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ಸಲ ಅಡಿಕೆ ಮಾರುಕಟ್ಟೆಗೆ ಬರೋದು ಕಡಿಮೆಯಾಗುತ್ತದೆ ಅನಿಸುತ್ತೆ. ಹೀಗಾದರೆ ಅಡಿಕೆಗೆ ಬೆಲೆ ಕೂಡ ಬರಬಹುದು. ವ್ಯಾಪಾರ ಅಲ್ವಾ, ಜೂಜಿದ್ದ ಹಾಗೆ. ನಮಗಂತೂ ತಕ್ಷಣಕ್ಕೆ ಫಸಲು, ಮರ ಉಳಿಸಿಕೊಳ್ಳೋದು ಆದ್ಯತೆ ಆಗುತ್ತದೆ ಎನ್ನುತ್ತಾರೆ ಗುಡ್ಡೇಕೇರಿಯ ಕೃಷಿಕರಾದ ಕೆ.ಎಸ್.ಶ್ರೀಧರ್.