"ಶರಾವತಿ ಮೂಲವನ್ನು ಪಾರಂಪರಿಕ ತಾಣವಾಗಿ ಗುರುತಿಸಬೇಕು"
ಶಿವಮೊಗ್ಗ, ಸೆಪ್ಟೆಂಬರ್ 2: ಶರಾವತಿ ಮೂಲವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ತೀರ್ಥಹಳ್ಳಿ ತಾಲೂಕು ಪಂಚಾಯತ್ ಜೀವ ವೈವಿಧ್ಯ ಸಮಿತಿ ನಿರ್ಣಯ ಕೈಗೊಳ್ಳಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದರು.
ಸೋಮವಾರ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥಕ್ಕೆ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಶರಾವತಿ ನದಿಮೂಲದ ಸುತ್ತ ಇರುವ ಗುಡ್ಡ ಸೂಕ್ಷ್ಮ ಸ್ಥಿತಿಯಲ್ಲಿದೆ. ನದಿಮೂಲದ ಪುಷ್ಕರಿಣಿ, ಕೆರೆಯ ಅಭಿವೃದ್ಧಿ ಮಾಡಿ ಭೂಕುಸಿತ ಆಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲಿ ಏಕ ಜಾತಿ ನೆಡುತೋಪು ಕಟಾವು ಮಾಡಿ ಪವಿತ್ರ ವನ ನಿರ್ಮಾಣ ಮಾಡಬೇಕು. ಭೂ ಕುಸಿತದಿಂದ ಹಲವು ಕಡೆ ಅರಣ್ಯ ನಾಶವಾಗಿದೆ. ನೆಡುತೋಪು ನಿರ್ಮಾಣ ಬೇಡ ಎಂದು ತಜ್ಞರು ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ ಎಂದರು.
ಹಾಸನದ ಗೆಂಡೆಕಟ್ಟೆಯಲ್ಲಿ ಜೀವವೈವಿಧ್ಯ ವನ ನಿರ್ಮಾಣ: ಅನಂತ ಹೆಗಡೆ ಅಶೀಸರ
ಕುಮುದ್ವತಿ ನದಿ ಜನ್ಮ ತಾಳುವ ಹೊಸನಗರ ತಾಲೂಕು ಬಿಲ್ವೇಶ್ವರ ದೇವಾಲಯದ ಹಿಂದೆ ಇರುವ ಪುಷ್ಕರಣಿ ಈಗ ಸಮೃದ್ಧವಾಗಿದೆ. ಇಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಹುಂಚ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಂಚ ಹಸಿರು ಬೆಟ್ಟವನ್ನು ಸೂಕ್ಷ್ಮ ಪರಿಸರ ಪ್ರದೇಶ ಎಂದು ಗುರುತಿಸಲು ಜೀವವೈವಿಧ್ಯ ಸಮಿತಿ ನಿರ್ಣಯ ಕೈಗೊಂಡಿದೆ. ಹುಂಚದ ಹಸಿರು ಬೆಟ್ಟವನ್ನು ಉಳಿಸಲು ಸ್ಥಳೀಯರು ನಿರಂತರ ಹೋರಾಟ ನಡೆಸಿದ್ದಾರೆ ಎಂದು ಸ್ಮರಿಸಿದರು.