ಶಿವಮೊಗ್ಗದಲ್ಲಿ ಮೂರೇ ನಿಮಿಷಕ್ಕೆ ಭಾಷಣ ಮುಗಿಸಿದ ಅಮಿತ್ ಶಾ
Recommended Video
ಶಿವಮೊಗ್ಗ, ಏಪ್ರಿಲ್ 20: ಶಿವಮೊಗ್ಗಕ್ಕೆ ಇಂದು ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೇವಲ ಮೂರು ನಿಮಿಷದಲ್ಲಿ ಭಾಷಣ ಮುಗಿಸಿದ್ದು ಆಶ್ಚರ್ಯಕ್ಕೆ ಕಾರಣವಾಯಿತು.
ಭದ್ರಾವತಿಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಪರವಾಗಿ ರೋಡ್ಶೋ ನಡೆಸಿದ ಶಾ, ಕೇವಲ ಒಂದೇ ನಿಮಿಷದಲ್ಲಿ ಶಾಸ್ತ್ರಕ್ಕೆಂಬಂತೆ ಕೆಲವು ಮಾತು ಆಡಿ ಮಾತು ಮುಗಿಸಿಬಿಟ್ಟರು, ಅಮಿತ್ ಶಾ ನೋಡಲು ಆಗಮಿಸಿದ್ದ ಸಾವಿರಾರು ಕಾರ್ಯಕರ್ತರಿಗೆ ಇದು ನಿರಾಸೆ ಮೂಡಿಸಿತು.
ಭದ್ರಾವತಿಯಲ್ಲಿ ರೋಡ್ ಶೋ ಮಧ್ಯೆಯೇ ಮಾತನಾಡಲು ಮೈಕು ನೀಡಿದಾಗ, 'ಉರಿ ಬಿಸಿಲಿನಲ್ಲಿ ನೀವು ಬಂದಿರುವುದು ಸಂತಸ ತಂದಿದೆ, ಈ ಬಾರಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕಿದೆ, ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಗೆಲ್ಲಿಸಬೇಕಿದೆ' ಎಂದರು.
ಬೌದ್ಧ, ಹಿಂದೂ ಬಿಟ್ಟು ಎಲ್ಲ ನುಸುಳುಕೋರರನ್ನು ಹೊರಗಟ್ಟುತ್ತೇವೆ: ಶಾ
ದೇಶದ ರಕ್ಷಣೆಯ ದೃಷ್ಠಿಯಿಂದ ಮೋದಿ ಅವರನ್ನು ಗೆಲ್ಲಿಸಲೇಬೇಕಿದೆ. ಮೋದಿ ಗೆದ್ದರಷ್ಟೆ ಭಾರತ ಸುರಕ್ಷಿತವಾಗಿರಲಿದೆ, ನಮಗಾಗಿ ಇಷ್ಟು ದೂರ ಬಂದಿರುವ ನಿಮಗೆಲ್ಲಾ ಧನ್ಯವಾದ ಎಂದಷ್ಟೆ ಹೇಳಿ ಅಮಿತ್ ಶಾ ಮಾತು ಮುಗಿಸಿದರು.
ರಾಜ್ಯದಲ್ಲಿ ಅಮಿತ್ ಶಾ ಮಿಂಚು, ರಾಘವೇಂದ್ರ ಪರ ಪ್ರಚಾರ
ರಾಜ್ಯದಲ್ಲಿ ಅಮಿತ್ ಶಾ ಮಿಂಚು: ಸಿದ್ದಗಂಗಾ ಮಠಕ್ಕೆ ಭೇಟಿ
ಯಡಿಯೂರಪ್ಪ ಗೈರು
ಅಮಿತ್ ಶಾ ಅವರ ರೋಡ್ ಶೋಗೆ ಯಡಿಯೂರಪ್ಪ ಅವರು ಇಂದು ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಮಿತ್ ಶಾ ಅವರು ರೋಡ್ ಶೋ ನಲ್ಲಿ ನಡೆದುಕೊಂಡ ರೀತಿಯನ್ನೂ ಯಡಿಯೂರಪ್ಪ ಅವರು ಗೈರಾಗಿದ್ದನ್ನೂ ಪಕ್ಕ-ಪಕ್ಕ ಇಟ್ಟು ಗಮನಿಸಿದಲ್ಲಿ ಯಡಿಯೂರಪ್ಪ ಅವರಿಗೂ ಬಿಜೆಪಿ ಹೈಕಮಾಂಡ್ ಏನಾದರೂ ಮುನಿಸಿರಬಹುದೇ ಎಂಬ ಅನುಮಾನ ಮೂಡದೇ ಇರದು.
ಮೈತ್ರಿ ಸರ್ಕಾರದ ಬಗ್ಗೆ ಒಂದು ಮಾತೂ ಆಡದ ಶಾ
ಸಾಮಾನ್ಯವಾಗಿ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗಲೆಲ್ಲಾ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯುವುದು ಸಾಮಾನ್ಯ. ಅದರಲ್ಲಿಯೂ ಇಂದು ಯಡಿಯೂರಪ್ಪ ಅವರ ಸ್ವ-ಕ್ಷೇತ್ರದಲ್ಲಿ ಅವರ ಪುತ್ರನ ಪರವಾಗಿ ರೋಡ್ ಶೋ ಮಾಡಲು ಬಂದಿದ್ದರು. ಆದರೆ ಅವರು ಯಡಿಯೂರಪ್ಪ ಸಾಧನೆ ಬಗೆಗಾಗಲಿ, ಮೈತ್ರಿ ಸರ್ಕಾರದ ಬಗೆಗಾಗಲಿ ಒಂದು ಮಾತೂ ಸಹ ಹೇಳದೆ ಇರುವುದು ಆಶ್ಚರ್ಯ ತಂದಿತು.
ಪದೇ-ಪದೇ ಬರುತ್ತಿದ್ದ ಫೋನ್ ಕರೆಗಳು
ರೋಡ್ ಶೋ ಸಮಯದಲ್ಲಿ ಸಹ ಅಮಿತ್ ಶಾ ಅವರು ಪದೇ-ಪದೇ ಬರುತ್ತಿದ್ದ ಕರೆಗಳನ್ನು ಸ್ವೀಕರಿಸುವುದರಲ್ಲಿ ನಿರತರಾಗಿದ್ದರು, ರೋಡ್ ಶೋನಲ್ಲಿ ಶಾ ಗೆ ಜೊತೆಯಾಗಿ ರಾಘವೇಂದ್ರ, ಈಶ್ವರಪ್ಪಇತರ ಸ್ಥಳೀಯ ನಾಯಕರು ಇದ್ದರು.
ಮಧು ಬಂಗಾರಪ್ಪ vs ರಾಘವೇಂದ್ರ
ಶಿವಮೊಗ್ಗದಲ್ಲಿ ಚುನಾವಣಾ ಕಣ ರಂಗೇರಿದ್ದು ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕೆ ಇಳಿದಿದ್ದಾರೆ. ಅವರ ಪರವಾಗಿ ಡಿ.ಕೆ.ಶಿವಕುಮಾರ್ ಪ್ರಚಾರ ತಂತ್ರ ಹೆಣೆಯುತ್ತಿದ್ದಾರೆ ಇದು ಯಡಿಯೂರಪ್ಪ ಮತ್ತು ಮಗನಿಗೆ ಆತಂಕ ತಂದಿದೆ. ಹಾಗಾಗಿ ಸ್ವಂತ ಬಲ ಇದ್ದರೂ ಸಹ ಅಮಿತ್ ಶಾ ರಂತಹಾ ಸ್ಟಾರ್ ಪ್ರಚಾರಕರನ್ನು ಯಡಿಯೂರಪ್ಪ ಕರೆಸಿದ್ದಾರೆ ಎನ್ನಲಾಗುತ್ತಿದೆ.