ಮೇ 15ರ ತನಕ ಆಗುಂಬೆ ಘಾಟ್ನಲ್ಲಿ ವಾಹನ ಸಂಚಾರವಿಲ್ಲ
ಶಿವಮೊಗ್ಗ, ಏಪ್ರಿಲ್ 29 : ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆ ಮೇ 1 ರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗುವುದಿಲ್ಲ. ಶಾಶ್ವತ ದುರಸ್ತಿ ಕಾರ್ಯದ ಹಿನ್ನಲೆಯಲ್ಲಿ ಜಿಲ್ಲಾಡಳಿತ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ.
ಶಿವಮೊಗ್ಗ ಜಿಲ್ಲಾಡಳಿತ ಏಪ್ರಿಲ್ 1 ರಿಂದ 30ರ ತನಕ ಆಗುಂಬೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿತ್ತು. ಸೋಮವಾರ ಮತ್ತೊಂದು ಆದೇಶವನ್ನು ಹೊರಡಿಸಿದ್ದು, ಮೇ 15ರ ತನಕ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಆಗುಂಬೆ ಘಾಟ್ ಮೇ 1ರಿಂದ ವಾಹನ ಸಂಚಾರಕ್ಕೆ ಮುಕ್ತವಾಗಲ್ಲ?
ಆಗುಂಬೆ ಘಾಟ್ ರಸ್ತೆಯಲ್ಲಿ ಕಳೆದ ವರ್ಷ ಸುರಿದ ಬಾರಿ ಮಳೆಯಿಂದಾಗಿ ಹಲವು ಕಡೆ ಗುಡ್ಡ ಕುಸಿತ ಉಂಟಾಗಿದೆ. ಈ ಬಾರಿಯ ಮಳೆಗಾಲದಲ್ಲಿ ವಾಹನ ಸವಾರರಿಗೆ ತೊಂದರೆ ಆಗಬಾರದು ಎಂದು ಶಾಶ್ವತ ದುರಸ್ತಿ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ.
ಘಾಟ್ ರಸ್ತೆಯಲ್ಲಿ ಗುರುತಿಸಿರುವ ಕೆಲವು ಪ್ರದೇಶದಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಉಡುಪಿ ಜಿಲ್ಲೆಗೆ ಸೇರುವ ಆನೆಕಲ್ಲು ಬಳಿ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ರಸ್ತೆಗೆ ಕಾಂಕ್ರಿಟ್ ಹಾಕಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸಂಚಾರ ನಿಷೇಧವನ್ನು 15 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ....
ವಾಹನ ಸಂಚಾರ ನಿಷೇಧ
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್ ರಸ್ತೆಯ ಕಿ.ಮೀ.33.70 ಮತ್ತು 37.018 ಕಿ.ಮೀ.ನಡುವೆ ಗುಡ್ಡ ಕುಸಿದಿದೆ. ಇದನ್ನು ಶಾಶ್ವತವಾಗಿ ದುರಸ್ತಿ ಮಾಡುವ ಕಾಮಗಾರಿ ಕೈಗೊಳ್ಳುವ ಕಾರಣ ಏಪ್ರಿಲ್ 1 ರಿಂದ 30ರ ತನಕ ಆಗುಂಬೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಈಗ ಅದನ್ನು ಮೇ 15ರ ತನಕ ವಿಸ್ತರಣೆ ಮಾಡಲಾಗಿದೆ.
ಬಾರಿ ಮಳೆ, ಗುಡ್ಡ ಕುಸಿತ
2018ರ ಜುಲೈ 10 ಮತ್ತು 13ರಂದು ಸುರಿದ ಬಾರಿ ಮಳೆಯಿಂದಾಗಿ ಆಗುಂಬೆ ಘಾಟ್ ರಸ್ತೆಯ 7 ಮತ್ತು 14ನೇ ತಿರುವಿನಲ್ಲಿ ಹಾಗೂ ಆನೆ ಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಈ ಭಾಗದಲ್ಲಿ ಶಾಶ್ವತ ದುರಸ್ತಿ ಕಾರ್ಯವನ್ನು ನಡೆಸಲು ವಾಹನ ಸಂಚಾರ ಬಂದ್ ಮಾಡಲಾಗಿದೆ.
ಪರ್ಯಾಯ ಮಾರ್ಗಗಳು
ಆಗುಂಬೆ ಘಾಟ್ ವಾಹನಗಳಿಗೆ ಬಂದ್ ಆಗಿರುವ ಹಿನ್ನಲೆಯಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಲಘು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಮಾರ್ಗವನ್ನು ಜಿಲ್ಲಾಡಳಿತ ನಿಗದಿ ಮಾಡಿದೆ.
ಅರಣ್ಯ ಇಲಾಖೆಯಿಂದ ತೊಂದರೆ
ಆಗುಂಬೆ ಘಾಟ್ ರಸ್ತೆ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗಕ್ಕೆ ಒಳಪಡುತ್ತದೆ. ಘಾಟ್ ರಸ್ತೆಯಲ್ಲಿ ಕಾಮಗಾರಿ ನಡೆಸಲು ಅವರು ಹಲವು ನಿರ್ಭಂದವನ್ನು ಹಾಕುತ್ತಿದ್ದಾರೆ. ಆದ್ದರಿಂದ, ನಿಗದಿತ ಗುರಿಯಂತೆ ಏಪ್ರಿಲ್ 30ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.