ಮಾರ್ಚ್ 1 ರಿಂದ ಆಗುಂಬೆ ಘಾಟ್ನಲ್ಲಿ ವಾಹನ ಸಂಚಾರ ನಿಷೇಧವಿಲ್ಲ
ಶಿವಮೊಗ್ಗ, ಫೆಬ್ರವರಿ 28 : ಆಗುಂಬೆ ಘಾಟ್ನಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಮುಂದೂಡಲಾಗಿದೆ. ಮಾರ್ಚ್ 1 ರಿಂದ 31ರ ತನಕ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಈ ಕುರಿತು ಗುರುವಾರ ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿರುವ ಕಾರಣ ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ಕಾರಣದಿಂದ ವಾಹನ ಸಂಚಾರ ನಿಷೇಧಿಸಲಾಗಿತ್ತು.
ದ್ವಿತೀಯ ಪಿಯುಸಿ ಪರೀಕ್ಷೆಗಳು ಇರುವ ಕಾರಣ ವಾಹನಗಳ ಸಂಚಾರಕ್ಕೆ ಹೇರಿದ್ದ ನಿಷೇಧವನ್ನು ಮುಂದೂಡಲಾಗಿದೆ. ಮಾರ್ಚ್ 19ರಿಂದ 30 ದಿನಗಳ ಕಾಲ ಆಗುಂಬೆ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ವಾಹನ ಸವಾರರು ಗೊಂದಲಕ್ಕೆ ಒಳಗಾಗಬೇಕಿಲ್ಲ. ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್ ರಸ್ತೆಯಲ್ಲಿ ಮಾರ್ಚ್ 1 ರಿಂದ ವಾಹನಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ...
ಭೂ ಕುಸಿತ, ದಟ್ಟಮಂಜು : ಆಗುಂಬೆ ಘಾಟ್ ಸಂಚಾರ ಸ್ಥಗಿತ
ಜಿಲ್ಲಾಧಿಕಾರಿಗಳ ಆದೇಶವೇನು?
ಮಾರ್ಚ್ 1 ರಿಂದ 18ರ ತನಕ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಆಗುಂಬೆ ಘಾಟ್ ರಸ್ತೆಯನ್ನು ಬಳಸಿ ವಿದ್ಯಾರ್ಥಿಗಳು ಹೆಬ್ರಿ-ಆಗುಂಬೆ-ಶೃಂಗೇರಿ, ಆಗುಂಬೆ-ಶೃಂಗೇರಿ ಮಾರ್ಗಗಳನ್ನು ಬಳಸಿ ಪರೀಕ್ಷೆಗೆ ತೆರಳುತ್ತಾರೆ. ವಾಹನ ಸಂಚಾರ ನಿಷೇಧಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದ್ದರಿಂದ, ವಾಹನ ನಿಷೇಧ ಆದೇಶವನ್ನು ಮುಂದೂಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ದಯಾನಂದ ಹೇಳಿದ್ದಾರೆ.
ಮಾರ್ಚ್ 19 ರಿಂದ ವಾಹನಗಳ ನಿಷೇಧ
19/3/2019ರಿಂದ 30 ದಿನಗಳ ಕಾಲ ವಾಹನ ಸಂಚಾರವನ್ನು ಆಗುಂಬೆ ಘಾಟ್ ರಸ್ತೆಯಲ್ಲಿ ನಿಷೇಧಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಘಾಟ್ ರಸ್ತೆ ದುರಸ್ಥಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಮಾರ್ಚ್ 19ರಿಂದ ಕಾಮಗಾರಿಯನ್ನು ಆರಂಭಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಶಾಶ್ವತ ದುರಸ್ಥಿ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿ 169ರ ಆಗುಂಬೆ ಘಾಟ್ ರಸ್ತೆಯ ಕಿ.ಮೀ 33.70 ಮತ್ತು 37.018 ಕಿ.ಮೀ.ಗಳಲ್ಲಿ ಗುಡ್ಡ ಕುಸಿದಿರುವುದನ್ನು ಶಾಶ್ವತವಾಗಿ ದುರಸ್ಥಿಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಕಾಮಗಾರಿ ಸಂದರ್ಭದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಬದಲಿ ಮಾರ್ಗಗಳು
ಮಾರ್ಚ್ 19ರಿಂದ ಆಗುಂಬೆ ಘಾಟ್ ಬಂದ್ ಆದ ಬಳಿಕ ವಾಹನಗಳ ಸಂಚಾರಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಬದಲಿ ಮಾರ್ಗಗಳನ್ನು ಸೂಚಿಸಿದೆ. ಲಘು ಮತ್ತು ಭಾರಿ ವಾಹನಗಳು ಯಾವ ಮಾರ್ಗದಲ್ಲಿ ಸಂಚಾರ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ.