ಆಗುಂಬೆ ಘಾಟ್ ಮೇ 1ರಿಂದ ವಾಹನ ಸಂಚಾರಕ್ಕೆ ಮುಕ್ತವಾಗಲ್ಲ?
ಶಿವಮೊಗ್ಗ, ಏಪ್ರಿಲ್ 28 : ಆಗುಂಬೆ ಘಾಟ್ ರಸ್ತೆ ಮೇ 1ರಿಂದ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಕಡಿಮೆ ಇದೆ. ದುರಸ್ತಿ ಕಾಮಗಾರಿಗಾಗಿ ಏಪ್ರಿಲ್ 1ರಿಂದ 30ರ ತನಕ ಘಾಟ್ ರಸ್ತೆಯನ್ನು ಶಿವಮೊಗ್ಗ ಜಿಲ್ಲಾಡಳಿತ ಬಂದ್ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್ ರಸ್ತೆಯ 33.70 ಕಿ.ಮೀ ಮತ್ತು 37.018 ಕಿ.ಮೀ.ಯಲ್ಲಿ ಗುಡ್ಡ ಕುಸಿದಿದೆ. ಇದನ್ನು ಸರಿಪಡಿಸಲು ಶಾಶ್ವತ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಗಾಗಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ವಾಹನಗಳಿಗೆ ತೊಂದರೆಯಾಗಬಾರದು ಎಂದು ತುರ್ತಾಗಿ ದುರಸ್ಥಿ ಮಾಡಲಾಗುತ್ತಿದೆ. ನಿರೀಕ್ಷೆಯಂತೆ ಏಪ್ರಿಲ್ 30ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ. ಆದ್ದರಿಂದ, ಮೇ 1ರಿಂದ ವಾಹನ ಸಂಚಾರ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ.
ಆಗುಂಬೆ ಘಾಟ್ನಲ್ಲಿ ಕುಸಿತ, ಭಾರೀ ವಾಹನಗಳಿಗೆ ನಿಷೇಧ
ಘಾಟ್ ರಸ್ತೆಯಲ್ಲಿ ಗುರುತಿಸಿರುವ ಕೆಲವು ಪ್ರದೇಶಗಳಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಉಡುಪಿ ಜಿಲ್ಲೆಗೆ ಸೇರುವ ಆನೆಕಲ್ಲು ಬಳಿ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.
ರಾಜಾಜಿನಗರದಿಂದ ಔಟರ್ ರಿಂಗ್ ರೋಡ್ವರೆಗೆ ರಸ್ತೆ ಅಗಲೀಕರಣ
ಮೇ ತಿಂಗಳು ಪೂರ್ತಿ ಕಾಮಗಾರಿ ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣಿಸುವವರು ಹೆಚ್ಚು ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಕಾಗಿದೆ.
ಅರಣ್ಯ ಇಲಾಖೆ ಕಿರಿಕಿರಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ಥಿ ಕಾಮಗಾರಿ ಕೈಗೊಂಡಿದೆ. ಆದರೆ, ಕಾಮಗಾರಿಯ ವೇಳೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹಾಲಿ ಮಾರ್ಗದ ಪಕ್ಕದಲ್ಲಿನ ಸ್ವಲ್ಪ ಪ್ರದೇಶವನ್ನು ಬಳಸಿಕೊಳ್ಳಲು ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗ ಅವಕಾಶ ನೀಡುತ್ತಿಲ್ಲ.
ಆಗುಂಬೆ ಘಾಟ್ನಲ್ಲಿ ವಾಹನ ನಿಷೇಧದಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಿಂದ ಮಣಿಪಾಲ ಆಸ್ಪತ್ರೆಗೆ ತೆರಳುವ ರೋಗಿಗಳು ಪರದಾಡಬೇಕಾಗಿದೆ. ಪ್ರಯಾಣಕ್ಕೆ ಹೆಚ್ಚು ಸಮಯವನ್ನು ಅವರು ನೀಡಬೇಕಾಗಿದೆ.