ಆಗುಂಬೆಯಲ್ಲಿ ಮತ್ತೆ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ತೊಂದರೆ?
ಶಿವಮೊಗ್ಗ, ಜುಲೈ 13 : ತೀರ್ಥಹಳ್ಳಿ ತಾಲೂಕಿನಲ್ಲಿ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದೆ. ಆಗುಂಬೆ ಘಾಟ್ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಆಂತಕ ಎದುರಾಗಿದೆ.
ಶುಕ್ರವಾರ ಬೆಳಗ್ಗೆ ಆಗುಂಬೆ ಘಾಟ್ನ ಸನ್ ಸೆಟ್ ವ್ಯೂ ಪಾಯಿಂಟ್ ಬಳಿ ತಡೆ ಗೋಡೆ ಮತ್ತು ಗುಡ್ಡ ಕುಸಿದಿದೆ. ಘಾಟ್ ಪ್ರವೇಶ ಪಡೆಯವು ಸ್ಥಳದಲ್ಲಿಯೇ ಗುಡ್ಡ ಕುಸಿತ ಉಂಟಾಗಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಆಗುಂಬೆ ಘಾಟ್ನಲ್ಲಿ ಕುಸಿತ, ಭಾರೀ ವಾಹನಗಳಿಗೆ ನಿಷೇಧ
ಗುಡ್ಡ ಕುಸಿದ ಮಾಹಿತಿ ತಿಳಿದ ತಕ್ಷಣ ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿದರು. ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆಯೇ? ಕಾದು ನೋಡಬೇಕು.
ಜೂನ್ 28ರಂದು ಆಗುಂಬೆ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಮಣ್ಣಿನ ಚೀಲಗಳನ್ನು ತುಂಬಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈಗಲೂ ಭಾರೀ ವಾಹನಗಳಿಗೆ ಘಾಟ್ನಲ್ಲಿ ಸಂಚರಿಸಲು ಅನುಮತಿ ನೀಡಿಲ್ಲ.
ಭೂ ಕುಸಿತ, ದಟ್ಟಮಂಜು : ಆಗುಂಬೆ ಘಾಟ್ ಸಂಚಾರ ಸ್ಥಗಿತ
ಜೂನ್ 29ರಂದು ಶಿವಮೊಗ್ಗ ಜಿಲ್ಲಾಧಿಕಾಗಿ ಡಾ.ಎಂ.ಲೋಕೇಶ್ ಆಗುಂಬೆಗೆ ಭೇಟಿ ನೀಡಿದ್ದರು. ಘಾಟ್ ರಸ್ತೆಯಲ್ಲಿ ಮಣ್ಣು ಕುಸಿತ ಉಂಟಾಗಬಹುದಾದ ಸ್ಥಳಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದರು.
ಮಣ್ಣು ಕುಸಿತ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿ ತಾತ್ಕಾಲಿಕ ಪರಿಹಾರಗಳನ್ನು ಕೈಗೊಳ್ಳಬೇಕು. ಎಲ್ಲಾ ಅಪಾಯಕಾರಿ ತಿರುವಿನಲ್ಲಿ ಎಚ್ಚರಿಕೆ ಫಲಕಗಳನ್ನು, ಬ್ಯಾರಿಕೇಡ್ಗಳನ್ನು ಅಳವಡಿಸಬೇಕು ಮಳೆ ನೀರು ಆದಷ್ಟು ರಸ್ತೆಯ ಮೇಲೆ ಹರಿಯುವುದನ್ನು ತಪ್ಪಿಸಲು ರಸ್ತೆ ಎರಡು ಬದಿಗಳಲ್ಲಿರುವ ಕಸಕಡ್ಡಿಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಮಣ್ಣು ಕುಸಿತ, ರಸ್ತೆ ತಡೆ ಇತ್ಯಾದಿಗಳು ಸಂಭವಿಸಿದರೆ ತಕ್ಷಣ ಕಾರ್ಯ ಪ್ರವೃತ್ತವಾಗಲು ಚೆಕ್ಪೋಸ್ಟ್ ಬಳಿ ಜೆಸಿಬಿಯನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಹೇಳಿದ್ದರು.