ಕುವೆಂಪು ವಿವಿಯಲ್ಲಿ ಲ್ಯಾಬ್ ಸ್ಥಾಪನೆ: ಡಿಆರ್ಡಿಒ ವಿಜ್ಞಾನಿಗಳ ಭೇಟಿ
ಶಿವಮೊಗ್ಗ, ಮಾರ್ಚ್ 5: ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ವಿಜ್ಞಾನ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ಹಿರಿಯ ವಿಜ್ಞಾನಿ ಡಾ.ಎ.ಕೆ.ಸಿಂಗ್ ನೇತೃತ್ವದ ಉನ್ನತ ನಿಯೋಗ ಭೇಟಿ ನೀಡಿತ್ತು.
ಉನ್ನತ ವಿಜ್ಞಾನಿಗಳ ತಂಡವು ಈಗಾಗಲೇ ವರದಿ ಸಲ್ಲಿಸಿದ್ದು, ಪ್ರಯೋಗಾಲಯ ಆರಂಭಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
105 ಕೋಟಿ ರೂ.ಗಳ ಮೂಗೂರು ಯೋಜನೆಗೆ ಸೊರಬದಲ್ಲಿ ಸಿಎಂ ಯಡಿಯೂರಪ್ಪ ಚಾಲನೆ
ಜನವರಿ 5ರಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಸಂಶೋಧನಾ ಘಟಕದ ಜತೆಯಲ್ಲಿ ಡಿಆರ್ಡಿಒ ಪ್ರಯೋಗಾಲಯ ಸ್ಥಾಪಿಸುವಂತೆ ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕುವೆಂಪು ವಿವಿಗೆ ಭೇಟಿ ನೀಡಿತ್ತು ಎಂದು ಹೇಳಿದ್ದಾರೆ.
ಡಿಆರ್ಡಿಒ ಸ್ಥಾಪನೆಗೆ ಬೇಕಿರುವ ಮೂಲ ಸೌಕರ್ಯ, ಸೂಕ್ತ ಪರಿಸರ, ಸಾರಿಗೆ, ರೈಲ್ವೆ, ವೈಮಾನಿಕ ಸಂಪರ್ಕ, ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೈಸರ್ಗಿಕ ಗಿಡಮೂಲಿಕೆಗಳು, ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿ, ಲಭ್ಯವಿರುವ ಕಾಲೇಜುಗಳು ಸೇರಿದಂತೆ ಅನುಕೂಲಕರ ಅಂಶಗಳ ಬಗ್ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಜ್ಞಾನಿಗಳ ತಂಡಕ್ಕೆ ಮಾಹಿತಿ ನೀಡಿದರು.
ಡಿಆರ್ಡಿಒ ಸ್ಥಾಪನೆಯಿಂದ ಜಿಲ್ಲೆಗೆ ಆಗುವ ಅನುಕೂಲಗಳ ಕುರಿತು ವಿವರಿಸಿದರು. ಪ್ರಯೋಗಾಲಯ ಸ್ಥಾಪಿಸುವ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ವಿಜ್ಞಾನಿಗಳೊಂದಿಗೆ ಚರ್ಚಿಸಿದರು.
ಕುವೆಂಪು ವಿವಿಯಲ್ಲಿ ಡಿಆರ್ಡಿಒ ಘಟಕ ಸ್ಥಾಪಿಸಲು ತಾಂತ್ರಿಕ ತಂಡವು ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಏರೋನಾಟಿಕ್ಸ್, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಯುದ್ಧ ವಾಹನಗಳು, ಇಂಜಿನಿಯರಿಂಗ್ ವ್ಯವಸ್ಥೆಗಳು, ಸಲಕರಣೆಗಳು, ಕ್ಷಿಪಣಿಗಳು, ಸುಧಾರಿತ ಕಂಪ್ಯೂಟರಿಂಗ್ ಮತ್ತು ಸಿಮ್ಯುಲೇಶನ್, ವಿಶೇಷ ವಸ್ತುಗಳು, ನಾಕಾ ವ್ಯವಸ್ಥೆಗಳಂತ ವಿವಿಧ ವಿಭಾಗಗಳನ್ನು ಒಳಗೊಂಡ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಡಿಆರ್ಡಿಒ ಪ್ರಯೋಗಾಲಯ ಸ್ಥಾಪಿಸುವಂತೆ ಸಂಸದ ರಾಘವೇಂದ್ರ ಒತ್ತಾಯಿಸಿದರು.
ಡಿಆರ್ಡಿಒ ಡೈರಕ್ಟರ್ ಜನರಲ್ ಎ.ಕೆ.ಸಿಂಗ್, ಹಿರಿಯ ವಿಜ್ಞಾನಿಗಳಾದ ಡಾ.ಮಣಿಮೋಳಿ ಥಿಯೊಡರ್, ಕೆ.ಕೆ.ಪಾಠಕ್, ದೇವಕಾಂತ ಪಹಾಡ್ ಸಿಂಗ್, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ವಿವಿ ಕುಲಪತಿ ಪ್ರೊ.ಬಿ.ಪಿ ವೀರಭದ್ರಪ್ಪ, ಕುಲಸಚಿವ ಪ್ರೊ.ಎಸ್.ಎಸ್ ಪಾಟೀಲ್ ಇತರರಿದ್ದರು.