ಶಿವಮೊಗ್ಗದ ಮಹದೇವಸ್ವಾಮಿಗೆ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ
ಶಿವಮೊಗ್ಗ, ಮೇ 18: ಕೇಂದ್ರ ಸರ್ಕಾರದ ಪ್ರತಿಷ್ಠಿತ ಸ್ವಚ್ಛ ಸರ್ವೇಕ್ಷಣ 2018 ಅಭಿಯಾನ ಪ್ರಶಸ್ತಿಗೆ ಶಿವಮೊಗ್ಗದ ನಿವೃತ್ತ ಪೇಪರ್ ಮಿಲ್ ವ್ಯವಸ್ಥಾಪಕ ಟಿ.ಎಸ್. ಮಹದೇವಸ್ವಾಮಿ ಆಯ್ಕೆಯಾಗಿದ್ದಾರೆ.
ವಿನೋಬಾನಗರದ ಮೂರನೇ ಮುಖ್ಯರಸ್ತೆಯ ನಿವಾಸಿಯಾಗಿರುವ 64 ವರ್ಷದ ಮಹದೇವಸ್ವಾಮಿ ಕಳೆದ ಎರಡು ವರ್ಷಗಳಿಂದ ನಡೆಸುತ್ತಿರುವ ಪರಿಸರ ಸ್ನೇಹಿ ಹಾಗೂ ಅಡುಗೆ ಮನೆಯ ತ್ಯಾಜ್ಯದಿಂದಲೇ ಗೊಬ್ಬರ ತಯಾರಿಸುವ ತಂತ್ರಜ್ಞಾನದ ಮೂಲಕ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮೈಸೂರು ನಗರ ಮತ್ತೆ ದೇಶದಲ್ಲೇ ಸುಂದರ!
ಮನೆ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಬಳಸಿಕೊಂಡರೆ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ಹೇಗೆ ಸಾಧ್ಯವಾಗುತ್ತದೆ ಎನ್ನುವುದನ್ನು ಮಹದೇವ ಸ್ವಾಮಿ ಕಳೆದ ಎರಡು ವರ್ಷಗಳಿಂದ ಪ್ರಯೋಗಾತ್ಮಕವಾಗಿ ಸಾಬೀತುಪಡಿಸಿದ್ದಾರೆ. ಮಹದೇವಸ್ವಾಮಿಯವರು ಹೇಳುವ ಪ್ರಕಾರ ನಾನು ಎರಡು ವರ್ಷಗಳ ಹಿಂದೆ ಈ ಪ್ರಯೋಗವನ್ನು ಅರಂಭಿಸಿದೆ.
ಸಾಮಾನ್ಯವಾಗಿ ಜನರು ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಕಷ್ಟು ನಿರ್ಲಕ್ಷ್ಯ ತೋರುತ್ತಾರೆ. ಆದರೆ ಅದೇ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು ಎಷ್ಟು ಸುಲಭ ಎನ್ನುವ ಕನಿಷ್ಠ ಮಾಹಿತಿಯು ಜನರಿಗೆ ಇರುವುದಿಲ್ಲ. ಹೀಗಾಗಿ ಜನರಲ್ಲಿ ತ್ಯಾಜ್ಯದ ಬಗೆಗೆ ನಿರ್ಲಕ್ಷ್ಯ ಭಾವನೆ ಇರುತ್ತದೆ.
ನಾನು ಕೇವಲ ಪಿವಿಸಿ ಪೈಪ್ ಬಳಸಿ ಅದಕ್ಕೆ ಆಕಳು ಸಗಡಿ ಬೆಲ್ಲ, ಹಾಗೂ ನೀರನ್ನು ಬಳಸಿ, ಅದಕ್ಕೆ ಅಡುಗೆ ಮನೆಯ ತ್ಯಾಜ್ಯ ಹರಿಬಿಟ್ಟು ಯಶಸ್ವಿಯಾಗಿ ಗೊಬ್ಬರ ತಯಾರಿಸಿದ್ದೇನೆ. 100 ಗ್ರಾಂ ಗೊಬ್ಬರವನ್ನು 600 ರಿಂದ 700ರವರೆಗೆ ಮಾರಾಟ ಮಾಡುತ್ತಿದ್ದೇನೆ ಎಂದು ವಿವರಿಸುತ್ತಾರೆ.
ಅಡುಗೆ ಮನೆಯಿಂದ ಹೊರ ಬರುವ ತ್ಯಾಜ್ಯವು ಗಟ್ಟಿಯಾಗಿದ್ದರೆ ಅದಕ್ಕೆ ನೀರನ್ನು ಬೆರೆಸಿ ಬೆಲ್ಲ ಹಾಗೂ ಆಕಳು ಸಗಣಿ ಬೆರೆಸುವುದರಿಂದ ನಿರಂತರವಾಗಿ ಮೂರು ವಾರಗಳ ನಂತರ ಅದರಿಂದ ಗೊಬ್ಬರವನ್ನು ಹೊರತೆಗೆಯಬಹುದಾಗಿದೆ. ಹೀಗೆ ಜನರು ತಮ್ಮ ಮನೆಯ ತ್ಯಾಜ್ಯದಿಂದಲೇ ಆದಾಯ ಗಳಿಸಬಹುದಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.