ಶಿವಮೊಗ್ಗ: ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು
ಶಿವಮೊಗ್ಗ, ಜನೆವರಿ 1: ಬೆಂಗಳೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ಗುರುವಾರ (ಡಿ.31) ರಾತ್ರಿ ಸಮಯದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಹೊರಟ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ಜಿಲ್ಲೆಯ ಕುಂಸಿಯಿಂದ ಮುಂದಕ್ಕೆ ಸೂಡೂರು ಹತ್ತಿರ ರೈಲು ಹಳಿತಪ್ಪಿದೆ.
ಶಿವಮೊಗ್ಗ,ಭದ್ರಾವತಿಯಲ್ಲಿ ಎಸಿಬಿ ದಾಳಿ; ದಾಖಲೆಗಳ ಪರಿಶೀಲನೆ
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದ್ದು, ಶಿವಮೊಗ್ಗದಿಂದ ರಾತ್ರಿಯೇ ಇಂಜಿನಿಯರಿಂಗ್ ಸ್ಟಾಫ್, ಡಾಕ್ಟರ್ಸ್ ಸ್ಟಾಫ್ ಗಳನ್ನು ಕಳುಹಿಸಲಾಗಿತ್ತು.
ಗುರುವಾರ ಸಂಜೆಯಷ್ಟೆ ಹೊಸದಾಗಿ ಹಳಿ ಪಕ್ಕದಲ್ಲಿ ಜಲ್ಲಿ ಹಾಕಲಾಗಿದ್ದು, ಅದು ಹಳಿಯ ಮೇಲೆ ಬಿದ್ದು ರೈಲು ಇಂಜಿನ್ ನ ಮುಂದಿನ ಎರಡು ಚಕ್ರವು ಹಳಿ ತಪ್ಪಿದೆ. ಚಾಲಕನ ಸಮಯಪ್ರಜ್ಞೆಯಿಂದ ಆಗಬಹುದಾದಂತಹ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
ರೈಲಿನಲ್ಲಿದ್ದ ಪ್ರಯಾಣಿಕರೆಲ್ಲಾ ಬೇರೆ ವಾಹನ ಹಿಡಿದು ತಮ್ಮ ತಮ್ಮ ಮನೆಗೆ ತೆರಳಿರುವುದಾಗಿ ತಿಳಿದುಬಂದಿದ್ದು, ಗುರುವಾರ ರಾತ್ರಿ 10.30ರ ವೇಳೆಗೆ ತಾಳಗುಪ್ಪದಿಂದ ಬೆಂಗಳೂರಿಗೆ ತೆರಳಲು ಇದ್ದ ರೈಲು ರದ್ದಾಗಿತ್ತು.