ಆಗುಂಬೆಯ ದಟ್ಟಕಾಡಿನಲ್ಲಿ ಹೆಣ್ಣು ಮಗು ಪತ್ತೆ.! ಮುಂದೆ ಆಗಿದ್ದೇನು?
ಶಿವಮೊಗ್ಗ, ಜನವರಿ 31: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟ್ ನ ಏಳನೆಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಆಗುಂಬೆ ಘಾಟ್ ನಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ 7 ನೇ ತಿರುವಿನಲ್ಲಿ 5 ವರ್ಷದ ಹೆಣ್ಣು ಮಗು ಅಳುತ್ತ ನಿಂತಿರುವುದನ್ನು ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರಿನ ಕಾರು ಚಾಲಕ ನೋಡಿ, ತಕ್ಷಣ ಇಳಿದು ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಕೊಲ್ಲೂರು-ಕೊಡಚಾದ್ರಿ ನಡುವೆ ಕೇಬಲ್ ಕಾರ್ ಸಂಪರ್ಕ..!
ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಚಿಕ್ಕಮಂಗಳೂರು ಜಿಲ್ಲೆಯ ಎನ್.ಆರ್.ಪುರ ಮೂಲದವರಾದ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು.
ಪ್ರವಾಸದಿಂದ ವಾಪಾಸ್ಸು ಬರುವಾಗ ರಾತ್ರಿ ಸಮಯವಾಗಿದ್ದರಿಂದ ಟಿಟಿ ವಾಹನದಲ್ಲಿ ಪೋಷಕರು ಹಾಗೆಯೇ ನಿದ್ರೆಗೆ ಜಾರಿದ್ದಾರೆ. ಹಿಂದಿನ ಡೋರ್ ಅಚಾನಕ್ ತೆರೆದಿದ್ದರಿಂದ ಮಗು ಏಳನೆಯ ಕ್ರಾಸ್ ನಲ್ಲಿ ಹೊರಗೆ ಬಿದ್ದಿದೆ.
ಆದರೆ ಪೋಷಕರು ನಿದ್ರೆಯಲ್ಲಿದ್ದರಿಂದ ಮಗು ಬಿದ್ದಿರುವುದು ತಿಳಿಯಲಿಲ್ಲ. ಟಿಟಿ ವಾಹನ ಹಾಗೆಯೇ ಮುಂದೆ ಚಲಿಸಿದೆ. ಆದರೆ ಎನ್.ಆರ್.ಪುರಗೆ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ಮಗು ಆನ್ವಿ ಗಾಡಿಯಲ್ಲಿ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡಿದ್ದಾರೆ.
ತಕ್ಷಣ ಅದೇ ಮಾರ್ಗವಾಗಿ ವಾಪಾಸು ಮಗುವನ್ನು ಹುಡುಕುತ್ತಾ ಬಂದಿದ್ದಾರೆ. ಬರುವಾಗ ಆಗುಂಬೆ ಫಾರೆಸ್ಟ್ ಗೇಟ್ ನಲ್ಲಿ ಮಗು ಸುರಕ್ಷಿತವಾಗಿ ಪೊಲೀಸ್ ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆ-ತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.