ಶಿವಮೊಗ್ಗದಲ್ಲಿ ಪತ್ತೆಯಾಯ್ತು ಇತಿಹಾಸದ ಕಥೆ ಹೇಳುವ ಮಹಿಳಾ ನಿಷಿಧಿ ಶಾಸನ
ಶಿವಮೊಗ್ಗ, ನವೆಂಬರ್ 5: ಇತಿಹಾಸದ ಶೋಧ ಎಂದಿಗೂ ಮುಗಿಯುವುದಿಲ್ಲ. ಶಾಸನಗಳಂತೂ ಇತಿಹಾಸದ ಬಹು ಮುಖ್ಯ ಕುರುಹುಗಳು. ಇದೀಗ ಶಿವಮೊಗ್ಗದಲ್ಲೂ ಇತಿಹಾಸದ ಕಥೆ ಹೇಳುತ್ತಿರುವ ಐದು ಶಾಸನಗಳು ದೊರೆತಿವೆ.
ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನ ಪತ್ತೆ
ಕುಮಧ್ವತಿ ನದಿ ಉಗಮ ಸ್ಥಳವಾದ ಹೊಸನಗರ ತಾಲೂಕಿನ ಹುಂಚದ ಬಳಿ ತೀರ್ಥಕೊಳದಲ್ಲಿ ಶಾಂತರಸ ವಂಶಸ್ಥರ ಮಹಿಳಾ ನಿಷಿಧಿ ಶಾಸನ ಸೇರಿದಂತೆ ಒಟ್ಟು ಐದು ಶಾಸನಗಳು ಈಚೆಗೆ ಲಭ್ಯವಾಗಿವೆ.
17-18ನೇ ಶತಮಾನದ ತೀರ್ಥಕೊಳ
17-18ನೇ ಶತಮಾನದಲ್ಲಿ ತೀರ್ಥಕೊಳ ಜೀರ್ಣೋದ್ಧಾರದ ಸಮಯದಲ್ಲಿ ನಾಲ್ಕು ಪಟ್ಟಿಗೆ ಶಾಸನಗಳು ದೊರೆತಿದ್ದು, 12ನೇ ಶತಮಾನದಲ್ಲಿ ಶಾಂತರಸರು ಕುಮಧ್ವತಿ ನದಿಯ ಉಗಮ ಸ್ಥಾನದಲ್ಲಿ ತೀರ್ಥಕೊಳವನ್ನು ನಿರ್ಮಿಸಿರುವುದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ಕ್ಷೇತ್ರ ಕಾರ್ಯ ಮಾಡುವಾಗ ತಿಳಿದುಬಂದಿದೆ.
ಶಾಸನದಲ್ಲಿನ ಮಹಿಳೆ ಯಾರು?
ತೀರ್ಥಕೊಳವು ಆಯತಾಕಾರದಲ್ಲಿದ್ದು, ಎರಡು ಕಡೆ ಮೆಟ್ಟಿಲುಗಳ ವ್ಯವಸ್ಥೆ ಇದೆ. ಗಜ ಶಿಲ್ಪಿ ಮತ್ತು ಕೆತ್ತನೆ ಶಿಲ್ಪಿಗಳಿಂದ ಕೂಡಿವೆ. ಇದಕ್ಕೆ ಗೋಮುಖ ಪ್ರನಾಳವಿದೆ. ನಿಷಿಧಿ ಹೋಗಿರುವ ಮತ್ತು ಶಿಲ್ಪಿಗಳಿರುವ ಪಟ್ಟಿಕೆ ತುಂಡಾಗಿದೆ. ಕೆಳ ಭಾಗದ ಶಿಲ್ಪದಲ್ಲಿ ಜೈನ ಮುನಿಗಳ ಸಲ್ಲೇಖನ ವ್ರತ ತೆಗೆದುಕೊಂಡು ನಿಷಿಧಿ ಹೋಗುವಂತಹ ಮಹಿಳೆಗೆ ಧರ್ಮ ಭೋದನೆ ಮಾಡುತ್ತಿರುವುದು ಮತ್ತು ಮಧ್ಯದಲ್ಲಿ ತೀರ್ಥಂಕರ ಸಿಂಹ ಪೀಠದಲ್ಲಿ ಕುಳಿತಿರುವುದು ಕಂಡು ಬರುತ್ತದೆ. ಇವುಗಳೆಲ್ಲವೂ ಹಳೆಗನ್ನಡದಲ್ಲಿವೆ.
ಈ ಶಾಸನವು ಜೈನರ ಶ್ಲೋಕವನ್ನು ಹೊಂದಿದ್ದು, ನಂತರ ಮಹಾಮಂಡಳೇಶ್ವರನಾದ ಸಾಂತರಸ ಶ್ರೀ ಭೋಮ ಸಾನ್ತಿ ದೇವನ ಆಳ್ವಿಕೆಯಲ್ಲಿ ಸಲ್ಲೇಖನ ವೃತ ಕೈಗೊಂಡು ನಿಷಿಧಿ ಹೋಗಿರುವ ಮಹಿಳೆಯನ್ನು ಉಲ್ಲೇಖಿಸಿದೆ. ಭೋಮ ಸಾನ್ತಿ ದೇವನು ಕಲ್ಯಾಣ ಚಾಲುಕ್ಯರ ಸಾಮಂತ ಅರಸನು ಆಗಿದ್ದನು. ಭೋಮರಸ ಮತ್ತು ಭೋಮ ಶಾಂತರಸ ಬೇರೆಯೇ? ಎಂಬ ಪ್ರಶ್ನೆಯೂ ಹುಟ್ಟಿದ್ದು, ಇದರ ಕುರಿತು ಅಧ್ಯಯನದ ಅವಶ್ಯಕತೆ ಇದೆ. ಮಹಿಳೆಯು ಯಾರು ಎಂಬುದು ತಿಳಿಯಬೇಕಿದೆ.
ಕೊಡಗಿನಲ್ಲಿ ಶಾತವಾಹನರ ಕಾಲದ ಶಿಲಾಶಾಸನ ಪತ್ತೆ!
ವಿಜಯನಗರ ನಂತರದ ಕಾಲಾವಧಿಯ ಶಾಸನ
ಇಲ್ಲಿನ ಮೆಟ್ಟಿಲುಗಳಲ್ಲಿ ನಾಲ್ಕು ಚಿಕ್ಕ ಪಟ್ಟಿಕೆಗಳ ಶಾಸನಗಳು ದೊರೆತಿವೆ. ಇವು ವಿಜಯನಗರದ ನಂತರದ ಕಾಲದವುಗಳಾಗಿದ್ದು, ಕೆಲವು ಸಂಖ್ಯೆಗಳನ್ನು, ಲಿಪಿಗಳನ್ನು ಹೊಂದಿವೆ. ಇವುಗಳ ಆಧಾರದ ಮೇರೆಗೆ ಈ ಕೊಳವು 17-18ನೇ ಶತಮಾನದಲ್ಲಿ ಜೀರ್ಣೋದ್ಧಾರವಾಗಿರುವುದು ತಿಳಿದುಬಂದಿದೆ. ಈ ಕೊಳದ ಸಮೀಪ ಕೋಷ್ಮಾಂಡಿನಿ ಯಕ್ಷಿ ಅನಾಥವಾಗಿ ಬಿದ್ದಿದ್ದನ್ನು ಶಿವಮೊಗ್ಗದ ಶಿವಪ್ಪ ನಾಯಕ ಅರಮನೆ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಕೊಳ ಪತ್ತೆ ಹಚ್ಚಿದ ತಂಡ
ಈ ಕೊಳವನ್ನು ಪತ್ತೆ ಹಚ್ಚಿ ಸ್ವಚ್ಛವಾಗಿಟ್ಟು ಹೊರ ಜಗತ್ತಿಗೆ ಪರಿಚಯಿಸಿದವರು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಸದಸ್ಯರಾದ ಅಜಯ್ ಶರ್ಮ, ದಿಲೀಪ್ ನಾಡಿಗ್, ನಾಗೇಶ್. ಶಾಸನವನ್ನ ಓದಿಕೊಟ್ಟವರು ಡಾ.ಜಗದೀಶ, ಸರ್ವಮಂಗಳ, ರವಿಕುಮಾರ್. ಇವರಿಗೆ ಪುರಾತತ್ವ ಇಲಾಖೆಯ ಆರ್.ಶೇಜೇಶ್ವರ್ ಕೃತಜ್ಞತೆ ಸಲ್ಲಿಸಿದ್ದಾರೆ.