ಭರ್ತಿಯಾದ ಭದ್ರಾ ಜಲಾಶಯ; 2,288 ಕ್ಯೂಸೆಕ್ ನೀರು ಹೊರಗೆ...
ಶಿವಮೊಗ್ಗ, ಸೆಪ್ಟೆಂಬರ್ 14: ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಸತತ ಮಳೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗಿದೆ. ಎರಡು ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಹರಿಸಲಾಗಿದೆ.
ಶಿವಮೊಗ್ಗದ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಇಂದು 4 ಗೇಟುಗಳು ಮೂಲಕ ಒಟ್ಟು 2,288 ಕ್ಯೂಸೆಕ್ ನೀರನ್ನು ಹೊರ ಬಿಡಲಾಯಿತು. ಭದ್ರಾ ಎಡದಂಡೆ, ಬಲದಂಡೆ ನಾಲೆಗಳಿಗೂ ನೀರು ಹರಿದಿದ್ದು, ರೈತರ ಮೊಗದಲ್ಲಿ ಸಂತಸ ತುಂಬಿದೆ.
ಶಿವಮೊಗ್ಗದಲ್ಲಿ ಮಳೆ ಹೆಚ್ಚಳ, ಭದ್ರಾ ಜಲಾಶಯದಿಂದ ಹೊರ ಹರಿವು
ಭದ್ರಾ ಅಣೆಕಟ್ಟು 186 ಅಡಿ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಡ್ಯಾಂನಲ್ಲಿ 185.7 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 71,116 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ. ಸದ್ಯ 70,012 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದು ನದಿಗೆ 400 ಕ್ಯೂಸೆಕ್, ಎಡದಂಡೆ ನಾಲೆಗೆ 100 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 917 ಕ್ಯೂಸೆಕ್ ಸೇರಿದಂತೆ ಒಟ್ಟು 2,288 ಕ್ಯೂಸೆಕ್ ನೀರು ಹೊರ ಬಿಡಲಾಯಿತು.
ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಭದ್ರಾ ಅಣೆಕಟ್ಟು ಭರ್ತಿಯಾಗಿದೆ. ನೀರನ್ನು ಹೊರ ಬಿಡುತ್ತಿದ್ದಂತೆ ನೀರು ಧುಮ್ಮಿಕ್ಕಿದ ದೃಶ್ಯ ನಯನ ಮನೋಹರವಾಗಿತ್ತು.