ಶಿವಮೊಗ್ಗ ಜೆಡಿಎಸ್ನಲ್ಲಿ ಸಂಚಲನ ಮೂಡಿಸಿದ ಕುಮಾರಣ್ಣ!
ಶಿವಮೊಗ್ಗ, ಸೆಪ್ಟೆಂಬರ್ 22; ಚುನಾವಣೆಗಳ ಸೋಲು, ನಾಯಕರ ಪಕ್ಷಾಂತರದಿಂದ ಸೊರಗಿದ್ದ ಶಿವಮೊಗ್ಗ ಜಿಲ್ಲಾ ಜೆಡಿಎಸ್ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಮೊದಲ ಜೆಡಿಎಸ್ ಅಭ್ಯರ್ಥಿಯನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಜೆಡಿಎಸ್ ಶಾಸಕರು ಗೆದ್ದಿದ್ದರು. ಆದರೆ 2018ರ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರಗಳು ಕೈಕೊಟ್ಟವು. ಒಂದು ಸ್ಥಾನದಲ್ಲಿ ಸಹ ಗೆಲ್ಲವು ಪಕ್ಷ ವಿಫಲವಾಯಿತು. ಬಳಿಕ ಜಿಲ್ಲೆಯಲ್ಲಿ ಪಕ್ಷದ ಪ್ರಭಾವ ತಗ್ಗಿತು.
ಕಾಂಗ್ರೆಸ್ ಸೇರುವುದಾಗಿ ಮತ್ತೊಬ್ಬ ಜೆಡಿಎಸ್ ಶಾಸಕನ ಘೋಷಣೆ!
ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಬಿಜೆಪಿಯ ಬಿ. ವೈ. ರಾಘವೇಂದ್ರ ವಿರುದ್ಧ ಸೋತರು. ಈ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಪಕ್ಷ ಸೊರಗಿತು. ಈಗ 2023ರ ಚುನಾವಣೆಗೆ ಪಕ್ಷವನ್ನು ತಯಾರಿ ಮಾಡಬೇಕಾದ ಅನಿವಾರ್ಯತೆ ಜೆಡಿಎಸ್ಗೆ ಇದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿರುವುದು ಶಿವಮೊಗ್ಗ ರಾಜಕೀಯದ ಲೆಕ್ಕಾಚಾರವನ್ನು ಬದಲಾಯಿಸಿದೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನದಲ್ಲಿ ಗೆಲ್ಲಲು ಕಾಂಗ್ರೆಸ್ ವೇದಿಕೆ ಸಿದ್ಧಗೊಳಿಸುತ್ತಿದೆ. ಜೆಡಿಎಸ್ ಸಹ ಜಿಲ್ಲೆಯಲ್ಲಿ ಮೊದಲಿನ ಪ್ರಾಬಲ್ಯ ಪಡೆಯಲು ತಂತ್ರ ರೂಪಿಸುತ್ತಿದೆ.
Breaking news; ಭದ್ರಾವತಿಗೆ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಕುಮಾರಣ್ಣ
ಭದ್ರಾವತಿಗೆ ಕುಮಾರಸ್ವಾಮಿ ಭೇಟಿ; ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭದ್ರಾವತಿಗೆ ಭೇಟಿ ನೀಡಿದ್ದರು. ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಶಕ್ತಿಧಾಮದಲ್ಲಿ ಮಾಜಿ ಶಾಸಕ ದಿ. ಅಪ್ಪಾಜಿ ಗೌಡ ಪ್ರತಿಮೆಯನ್ನು ಅನಾವರಣ ಮಾಡಿದರು. ಪ್ರತಿಮೆ ಅನಾವರಣ ಮಾಡಿ, ಪ್ರಥಮ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು.
ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ
ಮಾಧ್ಯಮಗಳ ಜೊತೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ಅಪ್ಪಾಜಿಗೌಡ ಅವರ ಬೆಂಬಲಿಗರು, ಭದ್ರಾವತಿ ಕ್ಷೇತ್ರದ ಜನರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಹಾಗಾಗಿ ಶಾರದಾ ಅಪ್ಪಾಜಿಗೌಡ ಅವರನ್ನು ಮುಂದಿನ ಅಭ್ಯರ್ಥಿಯಾಗಿ ಮಾಡುತ್ತೇನೆ" ಎಂದು ಘೋಷಣೆ ಮಾಡಿದರು.
2023ರ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಜಿಲ್ಲೆಯ ಮೊದಲ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದರು. 2013ರಲ್ಲಿ ಭದ್ರಾವತಿಯಲ್ಲಿ ಅಪ್ಪಾಜಿ ಗೌಡ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಗಿದೆ.
ಮೂವರು ಶಾಸಕರಿದ್ದರು; 2013ರ ಚುನಾವಣೆಯಲ್ಲಿ ಜೆಡಿಎಸ್ನ ಮೂವರು ಶಾಸಕರು ಶಿವಮೊಗ್ಗದಲ್ಲಿ ಗೆದ್ದಿದ್ದರು. ಸೊರಬದಲ್ಲಿ ಮಧು ಬಂಗಾರಪ್ಪ, ಭದ್ರಾವತಿಯಲ್ಲಿ ಅಪ್ಪಾಜಿ ಗೌಡ, ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾ ನಾಯ್ಕ್ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಪಕ್ಷ ಒಂದು ಸ್ಥಾನ ಸಹ ಗೆಲ್ಲಲು ಸಾಧ್ಯವಾಗಿಲ್ಲ.
ನಾಯಕರ ಪಕ್ಷಾಂತರ; 2019ರ ಲೋಕಸಭೆ ಚುನಾವಣೆಯ ಬಳಿಕ ಶಿವಮೊಗ್ಗ ಜೆಡಿಎಸ್ನ ಚಿತ್ರಣ ಬದಲಾಗಿದೆ. ಸೊರಬ ಕ್ಷೇತ್ರದ ಮಾಜಿ ಶಾಸಕ, ಕುಮಾರಸ್ವಾಮಿ ಆಪ್ತರಾಗಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದಾರೆ. ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡರು ಸಹ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಹೋಗಿದ್ದಾರೆ.
ಭದ್ರಾವತಿಯಲ್ಲಿ ಪಕ್ಷದ ನಾಯಕರಾಗಿದ್ದ ಅಪ್ಪಾಜಿ ಗೌಡರು ಕೋವಿಡ್ಗೆ ಬಲಿಯಾದರು. ಪಕ್ಷಾಂತರ, ಚುನಾವಣೆ ಸೋಲುಗಳಿಂದ ಜಿಲ್ಲೆಯಲ್ಲಿ ಜೆಡಿಎಸ್ ಸೊರಗಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ. ಶ್ರೀಕಾಂತ್ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಹೊಣೆ ಹೊತ್ತುಕೊಂಡಿದ್ದಾರೆ.
ಪಕ್ಷಕ್ಕೆ ಸವಾಲು; ಶಿವಮೊಗ್ಗದಲ್ಲಿ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಜೆಡಿಎಸ್ ಪಾಲಿಗೆ ಅಷ್ಟು ಸುಲಭದ ಮಾತಲ್ಲ. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪ್ರಭಾವ ಹೆಚ್ಚಿದೆ. ಜೆಡಿಎಸ್ ಸಹ ನಾಯಕರ ಕೊರತೆಯನ್ನು ಎದುರಿಸುತ್ತಿದೆ.
ಶಿಕಾರಿಪುರ (ಬಿ. ಎಸ್. ಯಡಿಯೂರಪ್ಪ), ಶಿವಮೊಗ್ಗ ನಗರ (ಕೆ. ಎಸ್. ಈಶ್ವರಪ್ಪ), ತೀರ್ಥಹಳ್ಳಿ (ಆರಗ ಜ್ಞಾನೇಂದ್ರ), ಸೊರಬ (ಕುಮಾರ್ ಬಂಗಾರಪ್ಪ), ಸಾಗರ (ಹರತಾಳು ಹಾಲಪ್ಪ), ಶಿವಮೊಗ್ಗ ಗ್ರಾಮಾಂತರ (ಅಶೋಕ ನಾಯ್ಕ್) ಬಿಜೆಪಿ ಶಾಸಕರು. ಭದ್ರಾವತಿಯಲ್ಲಿ ಕಾಂಗ್ರೆಸ್ನ ಬಿ. ಕೆ. ಸಂಗಮೇಶ್ವರ್ ಶಾಸಕರು. ಅಲ್ಲದೇ ಶಿವಮೊಗ್ಗ ಕ್ಷೇತ್ರದ ಸಂಸದರು ಬಿಜೆಪಿಯ ಬಿ. ವೈ. ರಾಘವೇಂದ್ರ.
ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವೂ ಹೆಚ್ಚಿದೆ. ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಪ್ರಸನ್ನ ಕುಮಾರ್, ಬಿ. ಕೆ. ಸಂಗಮೇಶ್ವರ್ ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ದೊಡ್ಡ ಪಡೆಯೇ ಇದೆ.
Recommended Video
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆಯುವ ಮೊದಲ ವಿಧಾನಸಭೆ ಚುನಾವಣೆ ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಹಿಂದೆ ಜನರು ಬಿಜೆಪಿ ಪಕ್ಷದ ಬೆಂಬಲಕ್ಕೆ ನಿಂತಿದ್ದರು. ಆದರೆ ಈಗ ಚುನಾವಣಾ ಚಿತ್ರಣ ಬದಲಾಗುವ ನಿರೀಕ್ಷೆ ಇದೆ. ರಾಜಕೀಯ ಲೆಕ್ಕಾಚಾರಗಳು ಬದಲಾದರೆ ಅದರ ಲಾಭ ಕಾಂಗ್ರೆಸ್ ಪಕ್ಷಕ್ಕೋ?, ಜೆಡಿಎಸ್ಗೂ ಎಂದು ಕಾದು ನೋಡಬೇಕಿದೆ.