ಪೌರ ಕಾರ್ಮಿಕರಿಗೆ ವರ್ಷದೊಳಗೆ 164 ಮನೆಗಳ ನಿರ್ಮಾಣ: ಈಶ್ವರಪ್ಪ
ಶಿವಮೊಗ್ಗ, ಅಕ್ಟೋಬರ್ 3: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಒಂದು ವರ್ಷದ ಒಳಗಾಗಿ 164 ಪೌರ ಕಾರ್ಮಿಕರಿಗೆ ಮನೆಗಳನ್ನು ಹಾಗೂ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸಿದ್ದೇಶ್ವರ ನಗರದಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ 6 ಎಕರೆ ಜಮೀನು ಗುರುತಿಸಲಾಗಿದ್ದು, ತಕ್ಷಣ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕು. ಪೌರ ಕಾರ್ಮಿಕರಿಗೆ ಮನೆಯನ್ನು ಒದಗಿಸುವ ವಿಶಿಷ್ಟ ಯೋಜನೆ ಇದಾಗಿದ್ದು, ಇಡೀ ರಾಜ್ಯಕ್ಕೆ ಈ ಕಾರ್ಯ ಮಾದರಿಯಾಗಿದೆ ಎಂದರು.
ಗುತ್ತಿಗೆ ಪೌರಕಾರ್ಮಿಕರಿಗೂ ಸರ್ಕಾರದಿಂದ ಹೆಲ್ತ್ಕಾರ್ಡ್: ಜಿ ಪರಮೇಶ್ವರ
ಮನೆಗಳ ನಿರ್ಮಾಣದಿಂದಾಗಿ ಇಡೀ ಊರನ್ನು ಸ್ವಚ್ಛಗೊಳಿಸುವಂತಹ ಮಹಾನ್ ಕಾಯಕ ಮಾಡುವ ಪೌರಕಾರ್ಮಿಕರಿಗೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಲಿದೆ. ಪೌರಕಾರ್ಮಿಕರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಗಾಂಧಿ ಜಯಂತಿ ದಿನದಂದು ಪೌರ ಕಾರ್ಮಿಕರ ಮನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ಒದಗಿರುವುದು ಅರ್ಥಪೂರ್ಣವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ದಿನ ನಿಜವಾದ ಸ್ವಾತಂತ್ರ್ಯ ಎಂಬ ಗಾಂಧೀಜಿ ಅವರ ನುಡಿ ಇಂದು ಸಾಕಾರವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಕಾರ್ಪೊರೇಟರ್ ಗಳಾದ ಚನ್ನಬಸಪ್ಪ, ನಾಗರಾಜ ಕಂಕಾರಿ, ಯೋಗೀಶ್ ಮತ್ತಿತರರು ಸಮಾರಂಭದಲ್ಲಿ ಇದ್ದರು.