ಭದ್ರಾ ಜಲಾಶಯದ 4 ಕ್ರಸ್ಟ್ಗೇಟ್ ಓಪನ್; ವಾರಾಂತ್ಯದಲ್ಲಿ ಸಿಗಂದೂರು ದೇವಿ ದರ್ಶನವಿಲ್ಲ
ಶಿವಮೊಗ್ಗ, ಆಗಸ್ಟ್ 05: ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆ ಭದ್ರಾ ಜಲಾಶಯದ ಕ್ರಸ್ಟ್ಗೇಟುಗಳನ್ನು ಓಪನ್ ಮಾಡಲಾಗಿದೆ. ನಾಲ್ಕು ಗೇಟ್ಗಳ ಮೂಲಕ ನದಿಗೆ ನೀರು ಹರಿಸಲಾಯಿತು.
ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಸದ್ಯ ನೀರಿನ ಮಟ್ಟ 184.5 ಅಡಿಯಷ್ಟಿದೆ. 15,206 ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ ಕ್ರಸ್ಟ್ಗೇಟ್ಗಳ ಮೂಲಕ 1600 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಳವಾದರೆ ಹೊರಹರಿವು ಪ್ರಮಾಣ ಏರಿಕೆಯಾಗುವ ಸಂಭವವಿದೆ.
ಕಳೆದ ಎರಡು ದಿನದಿಂದ ಮಲೆನಾಡು ಭಾಗದಲ್ಲಿ ಮತ್ತೆ ಮಳೆಯಾಗುತ್ತಿದ್ದು, ಹಾಗಾಗಿ ಜಲಾಶಯದ ಒಳ ಹರಿವು ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆ ಇದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿರುವ ಭದ್ರಾ ಜಲಾಶಯದಲ್ಲಿ ಗುರುವಾರ ನೀರು ಬಿಡುತ್ತಿರುವ ವಿಚಾರ ತಿಳಿದು ದೊಡ್ಡ ಸಂಖ್ಯೆಯ ಜನರು ಸೇರಿದ್ದರು. ಪ್ರತಿ ಗೇಟ್ ಮೇಲೆತ್ತಿ ನೀರು ಹೊರ ಬಿಡುತ್ತಿದ್ದಂತೆ ಜನರು ಜೋರಾಗಿ ಕೂಗಿ ಖುಷಿ ವ್ಯಕ್ತಪಡಿಸಿತ್ತಿದ್ದರು.
ಭಕ್ತರಿಗೆ ವೀಕೆಂಡ್ನಲ್ಲಿ ಸಿಗಂದೂರು ದೇವಿಯ ದರ್ಶನವಿಲ್ಲ
ವಾರಾಂತ್ಯದ ಸಂದರ್ಭದಲ್ಲಿ ಸಿಗಂದೂರಿನ ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ದೇವಿಯ ದರ್ಶನಕ್ಕೆ ಪ್ಲಾನ್ ಮಾಡುತ್ತಿರುವ ಭಕ್ತರಿಗೆ ನಿರಾಶೆ ಕಾದಿದೆ. ಕೋವಿಡ್ ಮೂರನೇ ಅಲೆ ನಿಯಂತ್ರಣ ಮಾಡುವ ಸಂಬಂಧ ವಾರಾಂತ್ಯದಲ್ಲಿ ಶ್ರೀಕ್ಷೇತ್ರಕ್ಕೆ ಭಕ್ತರ ಪ್ರವೇಶವನ್ನು ಶಿವಮೊಗ್ಗ ಜಿಲ್ಲಾಡಳಿತ ನಿರ್ಬಂಧಿಸಿದೆ.
ವಾರಾಂತ್ಯದಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು, ಹೊರ ರಾಜ್ಯದಿಂದಲೂ ಜನರು ಭೇಟಿ ನೀಡುತ್ತಾರೆ. ಇದರಿಂದ ಸೋಂಕು ಹರಡುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದೇವಸ್ಥಾನದ ಧರ್ಮದರ್ಶಿ ಡಾ. ಎಸ್.ರಾಮಪ್ಪ, ""ಕೋವಿಡ್ ನಿಯಂತ್ರಣದ ಉದ್ದೇಶದಿಂದ ಜಿಲ್ಲಾಡಳಿತ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿ ನಿಗದಿ ಮಾಡಿದೆ. ಆದ್ದರಿಂದ ಶ್ರೀಕ್ಷೇತ್ರಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಭಕ್ತರ ಸುರಕ್ಷತೆಯಿಂದ ಈ ನಿರ್ಧಾರ ಕೈಗೊಂಡಿದ್ದು, ಭಕ್ತರು ಸಹಕರಿಸಬೇಕು,'' ಎಂದು ಮನವಿ ಮಾಡಿದ್ದಾರೆ.
ಉಳಿದೆಲ್ಲ ಸೇವೆಗಳು ಸ್ಥಗಿತ
"ಇನ್ನು ಆಗಸ್ಟ್ 6 ರಿಂದ 13ರವರೆಗೆ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವೇಳೆ ದೇಗುಲಕ್ಕೆ ಬರುವ ಭಕ್ತರಿಗೆ ದೇವಿಯ ದರ್ಶನಕ್ಕಷ್ಟೆ ಅವಕಾಶ ಕಲ್ಪಿಸಲಾಗುತ್ತದೆ,'' ಎಂದು ಧರ್ಮದರ್ಶಿ ಎಸ್. ರಾಮಪ್ಪ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಧರೆ ಕುಸಿತ
ಕಳೆದ ಹದಿನೈದು ದಿನದ ಹಿಂದೆ ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದು ಅವಾಂತರವೇ ಸೃಷ್ಟಿಯಾಗಿತ್ತು. ಆದರೆ ಇದೀಗ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಸಮೀಪದ ಕುಂಬಾರದೂಡುಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಧರೆ ಕುಸಿದಿದ್ದು, ಈ ದೃಶ್ಯ ಗಮನಿಸಿದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಕುರುವಳ್ಳಿ ಸಮೀಪದ ಕುಂಬಾರದೂಡುಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆಯ ಮೇಲೆಯೇ ಧರೆ ಕುಸಿದು ಬಿದ್ದಿದೆ. ಧರೆ ಕುಸಿಯುವ ವೇಳೆ ಮಳೆ ಬರುತ್ತಿದ್ದರಿಂದ ಕಲ್ಲು ಕ್ವಾರೆಯಲ್ಲಿ ಕಾರ್ಮಿಕರು ಇರಲಿಲ್ಲ. ಹಾಗಾಗಿ ಅಪಾಯ ಸಂಭವಿಸಿಲ್ಲ.
ಧರೆ ಕುಸಿದಿರುವ ಸ್ಥಳ ರಾಷ್ಟ್ರೀಯ ಹೆದ್ದಾರಿ 169ಕ್ಕೆ ಹೊಂದಿಕೊಂಡಂತಿದ್ದು, ಈ ರಸ್ತೆಯಲ್ಲಿ ಶಿವಮೊಗ್ಗ- ಮಂಗಳೂರಿಗೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಜೊತೆಗೆ ಈ ಕ್ವಾರೆಯ ಪಕ್ಕದಲ್ಲೇ ಕುಂಬಾರದೂಡುಗೆ ಗ್ರಾಮವಿದೆ. ಈ ಗ್ರಾಮದಲ್ಲಿ ನೂರಾರು ಮನೆಗಳು ಇವೆ. ಅಧಿಕಾರಿಗಳು ಗುಡ್ಡ ಕುಸಿಯುತ್ತಿರುವ ಸ್ಥಳ ಪರಿಶೀಲಿಸಿ, ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.