ಶಿವಮೊಗ್ಗ: ಕೋವಿಡ್ಗೆ ಸಾವಿರ ಸಾವು, ಎಚ್ಚರ ತಪ್ಪಿದರೆ ಕಾದಿದೆ ಮತ್ತಷ್ಟು ಅನಾಹುತ
ಶಿವಮೊಗ್ಗ, ಜುಲೈ 12: ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಭೀತಿ ಇನ್ನೂ ದೂರವಾಗಿಲ್ಲ. ಈಗಲೂ ಪ್ರತಿದಿನ ನೂರರ ಸನಿಹಕ್ಕೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ನಡುವೆ ಈವರೆಗೂ ಕೋವಿಡ್ನಿಂದ ಮೃತರಾದವರ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗಿದೆ. ಕೊರೊನಾ ಎರಡನೇ ಅಲೆ ಮುಗಿಯಿತು ಎಂದು ಜನರು ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕೆಂದರೆ ಸಾವಿನ ಸಂಖ್ಯೆ ಸಾವಿರ ದಾಟಿ ಮುಂದುವರೆಯುತ್ತಿದೆ. ಪ್ರತಿದಿನ ಹಲವು ಕೊರೊನಾ ಸೋಂಕಿತರು ಕೊನೆಯುಸಿರೆಳೆಯುತ್ತಿದ್ದಾರೆ.
2020ರ ಮೇ 9ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರು ಪತ್ತೆಯಾದರು. ಅಹಮದಾಬಾದ್ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 9 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. 2020ರ ಜುಲೈ 16ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮೊದಲ ಬಲಿ ಪಡೆಯಿತು. ಈ ವಿಚಾರ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕ ಹೆಚ್ಚಾಯಿತು.
ಎರಡನೇ ಅಲೆಯಲ್ಲೂ ಮರಣ ಮೃದಂಗ
ಕೊರೊನಾ ಮೊದಲ ಅಲೆಯಲ್ಲಿ 22 ಸಾವಿರ ಜನರು ಸೋಂಕಿಗೆ ಒಳಗಾಗಿದ್ದರು. ಡಿಸೆಂಬರ್ ಕೊನೆವರೆಗೆ 349 ಸೋಂಕಿತರು ಶಿವಮೊಗ್ಗದಲ್ಲಿ ಮೃತರಾಗಿದ್ದರು. 2021ರ ಫೆಬ್ರವರಿಯಲ್ಲಿ ಕೊರೊನಾ ಸೋಂಕು ಎರಡನೇ ಅಲೆ ಕಾಣಿಸಿಕೊಂಡಿತು. ಕೊರೊನಾ ಸೋಂಕಿತರ ಸಂಖ್ಯೆಯಂತೆಯೇ ಸಾವಿಗೀಡಾಗುವವರ ಪ್ರಮಾಣದಲ್ಲೂ ಏರಿಕೆಯಾಗುತ್ತಲೆ ಇದೆ. ಈ ಅವಧಿಯಲ್ಲಿ 41 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 662 ಮಂದಿ ಸೋಂಕಿತರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
ಸಿಗಂದೂರಿನಲ್ಲಿ ಜನವೋ ಜನ, ಕೋವಿಡ್ ನಿಯಮ ಕೇಳೋರಿಲ್ಲ!
ಎರಡನೇ ಅಲೆಯಲ್ಲಿ ಸಾವಿಗೆ ವೇಗ
2021ರ ಮೇ ತಿಂಗಳಲ್ಲಿ ಅತ್ಯಧಿಕ ಸಾವು ಸಂಭವಿಸಿದ್ದು, ಈ ತಿಂಗಳ 28 ದಿನದಲ್ಲಿ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಹಳ್ಳಿ- ಹಳ್ಳಿಯಲ್ಲೂ ಕೋವಿಡ್ ಮತ್ತು ಸಾವಿನ ಭೀತಿ ಹೆಚ್ಚಲು ಇದು ಕಾರಣವಾಗಿತ್ತು. ಶಿವಮೊಗ್ಗ ಜಿಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಸಾವು ಸಂಭವಿಸಿದ್ದು 2020ರ ಜುಲೈ 16 ರಂದು. ಆಗಸ್ಟ್ 24ಕ್ಕೆ ಸಾವಿನ ಸಂಖ್ಯೆ 100ಕ್ಕೆ ತಲುಪಿತ್ತು. ಸೆಪ್ಟೆಂಬರ್ 13ಕ್ಕೆ ಸಾವಿನ ಸಂಖ್ಯೆ 200, ಆಗಸ್ಟ್ 2ರಂದು ಮೃತರ ಸಂಖ್ಯೆ 300ಕ್ಕೆ ಏರಿತು.
ಕಳೆದ ಆರು ದಿನದಲ್ಲಿ 14 ಸೋಂಕಿತರು ಮೃತ
ಕೊರೊನಾ ಎರಡನೇ ಅಲೆಯಲ್ಲಿ 2021ರ ಮೇ 3ರಂದು ಶಿವಮೊಗ್ಗ ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 400ಕ್ಕೆ ತಲುಪಿತ್ತು. ಮೇ 10ರಂದು 500 ಮಂದಿ ಮೃತರಾದರೆ, ಮೇ 17ರಂದು 600, ಮೇ 23ರಂದು 700ಕ್ಕೆ ತಲುಪಿತು. ಮೇ 31ರಂದು ಒಟ್ಟು ಸಾವಿನ ಸಂಖ್ಯೆ 800ಕ್ಕೆ ಮುಟ್ಟಿತು. ಜೂನ್ 11ರಂದು 900, ಜುಲೈ 6ರಂದು ಒಟ್ಟು ಮೃತರ ಸಂಖ್ಯೆ ಒಂದು ಸಾವಿರಕ್ಕೆ ತಲುಪಿತು. ಕಳೆದ ಆರು ದಿನದಲ್ಲಿ 14 ಸೋಂಕಿತರು ಮೃತರಾಗಿದ್ದಾರೆ. ಹಾಗಾಗಿ ಜುಲೈ 11ರ ವರದಿ ಪ್ರಕಾರ 1014 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಸರ್ಕಾರ ತಪ್ಪು ಲೆಕ್ಕ ತೋರಿಸುತ್ತಿದೆ ಎಂಬ ಆಪಾದನೆ
ಕೋವಿಡ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಸರ್ಕಾರ ತಪ್ಪು ಲೆಕ್ಕ ತೋರಿಸುತ್ತಿದೆ ಎಂಬ ಆಪಾದನೆಗಳಿವೆ. ಹೀಗಿದ್ದೂ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಸಾವಿರ ತಲುಪಿರುವುದು ಆತಂಕದ ಸಂಗತಿಯಾಗಿದೆ. ಈಗಾಗಲೇ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ತಜ್ಞರು ಕೂಡ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ತೆರವಾಯಿತು ಎಂದು ಜನರು ಮೈಮರೆತರೆ ಮರಣ ಮೃದಂಗ ಮುಂದುವರೆಯುವ ಸಾಧ್ಯತೆ ಇದೆ.