ಶಿವಮೊಗ್ಗದಲ್ಲಿ 100 ಕೋಟಿ ವೆಚ್ಚದ 100 ಹಾಸಿಗೆ ಆಸ್ಪತ್ರೆ ನಿರ್ಮಾಣ
ಶಿವಮೊಗ್ಗ, ಏಪ್ರಿಲ್ 23: ಇಲ್ಲಿನ ರಾಗಿಗುಡ್ಡದಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂರು ಹಾಸಿಗೆ ಸಾಮರ್ಥ್ಯದ ಇಎಸ್ಐ ಆಸ್ಪತ್ರೆ ಕಾಮಗಾರಿಗೆ ಇವತ್ತಿನಿಂದ ಚಾಲನೆ ಸಿಕ್ಕಿದೆ. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರಿನ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಈ ಇಎಸ್ಐ ಆಸ್ಪತ್ರೆಯಿಂದ ಅನುಕೂಲವಾಗಲಿದೆ. ಮುಂದಿನ ಚುನಾವಣೆ ಹೊತ್ತಿಗೆ ಇಎಸ್ಐ ಆಸ್ಪತ್ರೆ ಆರಂಭವಾಗಲಿದೆ ಎಂದರು.
ಸಾಯಬೇಕೋ, ವ್ಯಾಪಾರ ಮಾಡಬೇಕೋ ತೀರ್ಮಾನಿಸಿ: ಸಚಿವ ಈಶ್ವರಪ್ಪ
ಶಿವಮೊಗ್ಗದಲ್ಲಿ ಐತಿಹಾಸಿಕ ಮೈಲಿಗಲ್ಲು
ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ನಾಲ್ಕೈದು ಕಾರ್ಖಾನೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ಎಂಪಿಎಂ, ವಿಐಎಸ್ಎಲ್ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ವಹಿಸಲಾಗಿದೆ. ಮಾಚೇನಹಳ್ಳಿಯಲ್ಲಿ ಇನ್ನೊಂದು ಡಿಸ್ಪೆನ್ಸರಿ ಆರಂಭಿಸುವ ಅಗತ್ಯವಿದೆ. ಇವೆಲ್ಲವು ಐತಿಹಾಸಿಕ ಮೈಲುಗಲ್ಲುಗಳಾಗಿವೆ ಎಂದು ತಿಳಿಸಿದರು.
ಸ್ಥಗಿತವಾಗಿದ್ದ ಯೋಜನೆ ಪುನಾರಂಭ
ಇದೆ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಕೊಟ್ಟ ಮಾತಿನಂತೆ ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬಹುದಿನಗಳಿಂದ ಸ್ಥಗಿತವಾಗಿದ್ದ ಯೋಜನೆ ಫಲಪ್ರದವಾಗುತ್ತಿರುವುದು ಸಂತಸ ತಂದಿದೆ.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ಬಿ.ಆರ್.ವಾಸುದೇವ್ ಸೇರಿದಂತೆ ಹಲವರು ಇದ್ದರು.