ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ
ಸಾಗರ, ಫೆಬ್ರವರಿ 19 : ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಂಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಸೋಮವಾರ ಚಾಲನೆ ನೀಡಿದರು.
ಗಡ್ಕರಿ ಈ ಕಾಮಗಾರಿ ಉದ್ಘಾಟನೆ ಮಾಡುವ ಮೂಲಕ 7 ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಿಗಂದೂರು ಸೇತುವೆ ನಿರ್ಮಾಣಕ್ಕಾಗಿಯಡಿಯೂರಪ್ಪ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿ ಗಡ್ಕರಿ ಅವರು ಅನುಮೋದನೆ ನೀಡಿರುವುದು ಈ ಭಾಗದ ಜನತೆಯಲ್ಲಿ ಸಂತಸವನ್ನು ತಂದಿದೆ.
ಸೇತುವೆಯಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ . ಈ ಜನೋಪಕಾರಿ ಕಾರ್ಯದಿಂದ ಕರ್ನಾಟಕದ ಪರಿವರ್ತನೆಗೆ ನಾವು ಬದ್ಧರಾಗಿದ್ದೇವೆ ಎಂದು ಯಡಿಯೂರಪ್ಪ ಅವರು ಸಂದೇಶ ನೀಡಿದ್ದಾರೆ. ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ, ಬಿ.ವೈ ರಾಘವೇಂದ್ರ, ರುದ್ರೇಗೌಡ, ಆಯನೂರು ಮಂಜುನಾಥ್ ಉಪಸ್ಥಿತರಿದ್ದರು.
ಸೇತುವೆ ಹೇಗಿರುತ್ತದೆ, ಪ್ಲಾನಿಂಗ್ ಏನು: ಅಂಬಾರಗೋಡ್ಲು-ಕಳಸವಳ್ಳಿ ಮಧ್ಯೆ 2.16 ಕಿ,ಮೀ ಉದ್ದದ ಸೇತುವೆ ನಿರ್ಮಾಣವಾಗಲಿದೆ. ಇನ್ನು, ಸೇತುವೆ ನಿರ್ಮಾಣಕ್ಕೆ2 ಮೀಟರ್ ಸುತ್ತಳತೆಯ , 40 ಮೀಟರ್ ಎತ್ತರದ 21 ಪಿಲ್ಲರ್ ಹಾಕಲಾಗುತ್ತಿದೆ. ಇದರ ಮೇಲೆ16 ಮೀಟರ್ ಅಗಲದ ಸೇತುವೆ ನಿರ್ಮಿಸಲಾಗುತ್ತದೆ. ವಿಶೇಷ ಎಂದರೆ ಸೇತುವೆ ಎರಡೂ ಬದಿಯಲ್ಲಿ 1.50 ಮೀಟರ್ ಅಗಲದ ಫುಟ್ ಪಾತ್ ಗಳಿರಲಿವೆ.
ಇದಿಷ್ಟೇ ಅಲ್ಲ, ತೂಗು ಸೇತುವೆ ಮಾದರಿಯಲ್ಲಿ ಪ್ರತಿ ಪಿಲ್ಲರ್ ಗೂ ಕಬ್ಬಿಣದ ರೋಪ್ ಗಳನ್ನು ಕಟ್ಟಲಾಗುತ್ತದೆ. ಇದು ಸಿಗಂದೂರು ಸೇತುವೆಯ ಲುಕ್ ಹೆಚ್ಚಿಸಲಿದೆ. ಅಲ್ಲದೆ, ಸೇತುವೆ ಸಮತೋಲನದಿಂದ ಇರುವಂತೆ ನೋಡಿಕೊಳ್ಳುತ್ತದೆ.