ಶಿವಮೊಗ್ಗ : ಕೇಸರಿ ಬಾವುಟ ಹಿಡಿದು ನರ್ತನ, ಕಾಲೇಜಿನ ಸ್ಪಷ್ಟನೆ
ಶಿವಮೊಗ್ಗ, ಅಕ್ಟೋಬರ್ 09 : ಸಾಗರದ ಇಂದಿರಾ ಗಾಂಧಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸುದ್ದಿಯಲ್ಲಿದೆ. ಭಗವಧ್ವಜ ಹಿಡಿದು ವಿದ್ಯಾರ್ಥಿನಿಯರು ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ. ಈಗ ಕಾಲೇಜಿನ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟನೆ ನೀಡಿದೆ.
ಸಾಗರ: ಕೇಸರಿ ಬಾವುಟ ಹಿಡಿದು ವಿದ್ಯಾರ್ಥಿನಿಯರ ನರ್ತನ!
ಆರ್ಎಸ್ಎಸ್, ವಿಶ್ವಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಪಾಲಿಗೆ ಪವಿತ್ರವಾದ ಭಗವಧ್ವಜ ಹಿಡಿದು ವಿದ್ಯಾರ್ಥಿನಿಯರು ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯನ್ನು ವರದಿ ಮಾಡಿದ ಮಾಧ್ಯಮಗಳ ವಿರುದ್ಧವೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. 'ಶೈಕ್ಷಣಿಕ ವಾತಾವರಣ ಹಾಳು ಮಾಡುವವರು ಯಾವುದೇ ಧರ್ಮದವರಾಗಲಿ ಅದನ್ನು ಸಹಿಸಲಾಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಆಡಳಿತ ಮಂಡಳಿ ಹೇಳಿದೆ.
ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ಡಿ ರೇವಣ್ಕರ್ ಅವರು ನೀಡಿರುವ ಪತ್ರಿಕಾ ಹೇಳಿಕೆ ಇಲ್ಲಿದೆ.
'ಶೈಕ್ಷಣಿಕ ವಾತಾವರಣ ಹಾಳು ಮಾಡುವವರು ಯಾವುದೇ ಧರ್ಮದವರಾಗಲಿ ಅದನ್ನು ಸಹಿಸಲಾಗುವುದಿಲ್ಲ. ಆಡಳಿತ ಮಂಡಳಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಘಟನೆಯ ಹಿಂದೆ ಯಾರ ಕುಮ್ಮಕ್ಕಿದೆ ಎಂಬುದನ್ನು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು'
'ಯಾರೇ ಆಗಲಿ, ಯಾವುದೇ ಕೋಮಿನವರಾಗಲಿ ಶೈಕ್ಷಣಿಕ ವಾತಾವರಣ ಹಾಳುಮಾಡುವ ಯಾವುದೇ ಚಟುವಟಿಕೆಗಳಿಗೆ ಇನ್ನುಮುಂದೆ ಅವಕಾಶ ನೀಡುವುದಿಲ್ಲ'