ವೇದಾಧ್ಯಯನ ಮಾಡಿದ ತೀರ್ಥಮುತ್ತೂರು ಮಠಕ್ಕೆ ಶ್ರೀಶ್ರೀ ರವಿಶಂಕರ್ ಭೇಟಿ
ತೀರ್ಥಮುತ್ತೂರು (ತೀರ್ಥಹಳ್ಳಿ ತಾ., ಶಿವಮೊಗ್ಗ), ಸೆಪ್ಟೆಂಬರ್ 10 : 'ನನ್ನ ವೇದಾಧ್ಯಯನ ನಡೆದದ್ದು ಇದೇ ಮಠದಲ್ಲಿ. ಹಿಂದಿನ ಗುರುಗಳಾದ ಜ್ಞಾನೇಂದ್ರ ತೀರ್ಥ ಭಾರತಿ ಅವರು ನನಗೆ ಆಶೀರ್ವಾದ ಮಾಡಿದ್ದರು' ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ್ ಅವರು ಹೇಳುತ್ತಿದ್ದಂತೆ ತೀರ್ಥಮುತ್ತೂರು ಮಠದಲ್ಲಿನ ಕೆಲವರಿಗೆ ಅಚ್ಚರಿಯಾಯಿತು.
ಏಕೆಂದರೆ, ಈಗ ಶ್ರೀಶ್ರೀ ರವಿಶಂಕರ್ ಅಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಹೆಸರು, ಜತೆಗೆ ದೊಡ್ಡ ಮಟ್ಟದ ಬ್ರ್ಯಾಂಡ್. ಅಂಥವರ ವೇದಾಭ್ಯಾಸ ನಡೆದದ್ದು ಇಲ್ಲಿ ಎಂಬ ಸಂಗತಿ ಬಹಳ ಮಂದಿಗೆ ಗೊತ್ತಿರಲಿಲ್ಲ. ಮಠವು ಈಗ ಬಹಳ ಬದಲಾಗಿದೆ. ಜತೆಗೆ ಮಠದ ಹೆಬ್ಬಾಗಿಲನ್ನು ಹಾಗೇ ಉಳಿಸಿಕೊಂಡಿದ್ದೀರಿ ಎಂದು ಮೆಚ್ಚುಗೆಯ ಮಾತನಾಡಿದರು.
ಶಿಷ್ಯನ ಗೆಲುವನ್ನು ನಿಸ್ವಾರ್ಥವಾಗಿ ಸಂಭ್ರಮಿಸುವವನು 'ಗುರು'
ತೀರ್ಥಮುತ್ತೂರಿನ ಮಠದಲ್ಲಿ ಭಾನುವಾರ ಶ್ರಾವಣ ಮಾಸದ ಅಮಾವಾಸ್ಯೆ ಪ್ರಯುಕ್ತ ಮಹಾಮೃತ್ಯುಂಜಯ ಹೋಮ, ನರಸಿಂಹ ಹವನ ಆಯೋಜಿಸಲಾಗಿತ್ತು. ತಾವಾಗಿಯೇ ಕರೆ ಮಾಡಿದ ಶ್ರೀಶ್ರೀ ರವಿಶಂಕರ್, ಮಠಕ್ಕೆ ತಾವು ಬರುತ್ತಿರುವುದಾಗಿ ತಿಳಿಸಿದರು. ಆ ಕೂಡಲೇ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಯಿತು.
ದೇವಾಲಯ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನ
ಅಂತೂ ಶ್ರೀಶ್ರೀ ರವಿಶಂಕರ್ ಮಠಕ್ಕೆ ಬಂದೇಬಿಟ್ಟರು. ಅಲ್ಲಿ ಸೇರಿದ್ದವರಿಗೆ ತಮ್ಮ ಅನುಭವವನ್ನು ಹೇಳಿಕೊಂಡರು. ಮಠದ ಆಡಳಿತ ಮಂಡಳಿಯ ಸದಸ್ಯರಿಗೆ ತಾವೇ ಶಾಲು ಹೊದಿಸಿ, ಸನ್ಮಾನ ಮಾಡಿದರು. ಮಠದ ಕೆಲಸಕ್ಕೆ ಬಳಸಿಕೊಳ್ಳುವಂತೆ ಒಂದಿಷ್ಟು ಮೊತ್ತವನ್ನು ದೇಣಿಗೆ ನೀಡಿದರು. ಅಲ್ಲೇ ಮಧ್ಯಾಹ್ನದ ಊಟ ಮುಗಿಸಿದರು.
ತುಂಗಾ ನದಿಯ ತಟದಲ್ಲಿ ಧ್ಯಾನ ಮಾಡಿದರು
ಮಠದ ಎದುರಿಗೆ ಹರಿಯುವ ತುಂಗಾ ನದಿಯ ತಟದಲ್ಲಿ ಕೆಲ ಕಾಲ ಧ್ಯಾನ ಮಾಡಿದರು. ಉತ್ತರದ ಹೆಬ್ಬಾಗಿಲನ್ನು ಬದಲಿಸುವ ಸಂದರ್ಭದಲ್ಲಿ ಮೂಲ ಸ್ವರೂಪವನ್ನು ಉಳಿಸಿಕೊಳ್ಳಿ. ಮಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಭೇಟಿ ಮಾಡಿ, ಸಾಧ್ಯವಾಗುವಂಥ ನೆರವು ನೀಡುತ್ತೇನೆ ಎಂದು ಭರವಸೆ ನೀಡಿ, ಅಲ್ಲಿಂದ ಹೊರಟರು.
ಸಾವಿರ ವರ್ಷಗಳ ಇತಿಹಾಸ ಇರುವ ಮಠ
ಸಾವಿರ ವರ್ಷಗಳ ಇತಿಹಾಸ ಇರುವ ತೀರ್ಥಮುತ್ತೂರು ಮಠದಲ್ಲಿ ಈಶ್ವರ, ನರಸಿಂಹ, ಗೋಪಾಲಕೃಷ್ಣ, ಸೀತಾರಾಮ ಹಾಗೂ ಆಂಜನೇಯ ಮೂರ್ತಿಗಳಿವೆ. ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಠಕ್ಕೆ ನಡೆಕೊಳ್ಳುವ ಭಕ್ತರಿದ್ದಾರೆ. ಇತ್ತೀಚೆಗಷ್ಟೇ ಮಠದಲ್ಲಿ ರಥದ ನಿರ್ಮಾಣ ಮಾಡಲಾಗಿದೆ.
ಗಮನಾರ್ಹವಾದ ಅಭಿವೃದ್ಧಿ ಕೆಲಸ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೂಲಕ ಈ ಮಠಕ್ಕೆ ತೆರಳಬಹುದು. ಕೊಪ್ಪ ರಸ್ತೆಯಲ್ಲಿ ತೆರಳಿದರೆ, ಬಸ್ ರಾಮಕೃಷ್ಣಪುರದ ಹತ್ತಿರ ನಿಲ್ಲಿಸುತ್ತದೆ. ಅಲ್ಲಿಂದ ಎರಡೂವರೆ ಕಿಲೋಮೀಟರ್ ನಷ್ಟು ದೂರದಲ್ಲಿ ಸುಂದರ ಹಾಗೂ ಪ್ರಶಾಂತ ವಾತಾವರಣದಲ್ಲಿದೆ ತೀರ್ಥಮುತ್ತೂರು ಮಠ. ಇತ್ತೀಚಿನ ವರ್ಷಗಳಲ್ಲಿ ಮಠದಲ್ಲಿ ಗಮನಾರ್ಹವಾದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.