ಆಗುಂಬೆ ರಸ್ತೆಯಲ್ಲಿ ಹರಿಯುತ್ತಿದೆ ಕೊಳಚೆ ನೀರು: ಕೇಳೊರಿಲ್ಲ ಗೋಳು
ತೀರ್ಥಹಳ್ಳಿ, ಜೂನ್.27: ಶಿವಮೊಗ್ಗ-ಉಡುಪಿ ಜಿಲ್ಲೆಗಳ ವ್ಯಾಪ್ತಿಗೆ ಸೇರುವ ಆಗುಂಬೆ ಘಾಟಿ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಮತ್ತು ಬಹುತೇಕ ಮಣಿಪಾಲ ಆಸ್ಪತ್ರೆಗೆ ಹೋಗುವ ರೋಗಿಗಳು ಸಂಚರಿಸುತ್ತಾರೆ.
ಆದರೆ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಆಗುಂಬೆ ಘಾಟಿ ರಸ್ತೆಯ ಎರಡು ಬದಿಯಲ್ಲಿ ಕಸ, ಗಿಡಗಳು, ಮರದ ಹರೆಗಳು ಬಿದ್ದಿರುವುದು ಅಲ್ಲದೇ, ಚರಂಡಿಯಲ್ಲಿ ಹರಿಯುವ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಪ್ರಯಾಣಿಕರು ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ರಸ್ತೆಯಲ್ಲಿ ತುಂಬಿದ ಚರಂಡಿ ನೀರು: ಮನೆಯಲ್ಲೇ ಬಂಧಿಯಾದ ಜನರು
ಇತ್ತೀಚೆಗೆ ಶಿವಮೊಗ್ಗ ವಿಭಾಗದ ರಸ್ತೆಯನ್ನು 10 ಕೋಟಿ ವೆಚ್ಚ ಮಾಡಿ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ಆಗುಂಬೆ ಘಾಟಿಯ ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರಿನಿಂದ ಸಾರ್ವಜನಿಕರು, ಸ್ಥಳೀಯರು, ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.
ಅಲ್ಲದೇ, ಜನರಿಗೆ ಹೆಚ್ಚುತ್ತಿರುವ ಕಸದಿಂದ ರೋಗದ ಭೀತಿಯೂ ಕಾಡುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಅಥವಾ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ ಗಳು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕಾಗಿದೆ.
ಹಾಗೆಯೇ ಕೊಳಚೆ ನೀರು ರಸ್ತೆಗೆ ಹರಿಯದಂತೆ ವ್ಯವಸ್ಥೆ ಕಲ್ಪಿಸಿ, ಸಂಚಾರಕ್ಕೆ ಸಹಾಯವಾಗುವಂತೆ ಮಾಡಬೇಕೆಂದು ಸ್ಥಳೀಯರು, ವಾಹನ ಸವಾರರು ಒತ್ತಾಯಿಸಿದ್ದಾರೆ.