ನಾಳೆಯಿಂದ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ
ಸಾಗರ, ಮಾರ್ಚ್ 30: ಶ್ರೀ ಶ್ರೀಧರ ಸೇವಾ ಮಹಾಮಂಡಲವು ಸಮರ್ಥ ರಾಮದಾಸರ ಶಿಷ್ಯರೂ, ಮರಾಠಿ-ಕನ್ನಡ ಸಂತರೂ ಆದ ಶ್ರೀಧರ ಸ್ವಾಮಿಗಳ 45ನೇ ಆರಾಧನಾ ಮಹೋತ್ಸವವನ್ನು ವರದಪುರದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಹಮ್ಮಿಕೊಂಡಿದೆ.
ಶಿವಮೊಗ್ಗ ಜಿಲ್ಲೆಯ ವರದಪುರ(ವರದಹಳ್ಳಿ)ಯಲ್ಲಿ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 31ರಂದು ಶನಿವಾರ ಸಂಜೆ 4ಕ್ಕೆ ಕದ್ರಿ ಗೋಪಾಲನಾಥ್ ಶಿಷ್ಯರಾದ ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನ , ಏ.1ರಂದು ಸುರೇಖಾ ಗೋಲಾಪ ಹೆಗಡೆ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಗಾಯನ, ಏ.2ರಂದು ವೇಣುಗೋಪಾಲ್ ಹೆಗಡೆ ಅವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಲಿದೆ.
ವರದಹಳ್ಳಿ ಅಥವಾ ವರದಪುರವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಮತ್ತು ಸಮಾಧಿ ಹೊಂದಿದ ಸ್ಥಳವಾಗಿದೆ. ಇಲ್ಲಿಶ್ರೀಧರ ಸ್ವಾಮಿಗಳು ಸ್ಥಾಪಿಸಿದ ಆಶ್ರಮ, ಅವರ ಸಮಾಧಿ ಮತ್ತು ಧ್ವಜಗಳನ್ನು ಕಾಣಬಹುದಾಗಿದೆ. ಇತಿಹಾಸ ಪ್ರಸಿದ್ಧವಾದ ಶ್ರೀ ದುರ್ಗಾಂಬಾ ದೇವಾಲಯವೂ ಇದೆ.