ಮುತಾಲಿಕ್ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಮುಸ್ಲಿಂ ಕಲಾವಿದನಿಗೆ ಜೀವ ಬೆದರಿಕೆ
ಶಿವಮೊಗ್ಗ, ಜುಲೈ 26 : ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಜತೆ ಫೋಟೊ ತೆಗಿಸಿಕೊಂಡಿದ್ದಕ್ಕೆ ಮುಸ್ಲಿಂ ಸಂಗೀತ ಕಲಾವಿದರರೊಬ್ಬರಿಗೆ ಮಂಗಳವಾರ ದುಷ್ಕರ್ಮಿಗಳು ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ.
ತಬಲಾ ವಾದಕ ರಶೀದ್ ಖಾನ್ ಹಲ್ಲೆಗೊಳಗಾದವರು. ಇವರು ಕಾರ್ಯಕ್ರಮವೊಂದರಲ್ಲಿ ಪ್ರಮೋದ್ ಮುತಾಲಿಕ್ ಅವರ ಜತೆ ಫೋಟೊ ತೆಗೆಸಿಕೊಂಡು ಫೇಸ್ ಬುಕ್ ಗೆ ಹಾಕಿದ್ದರಿಂದ ಹಲ್ಲೆಗೆ ಕಾರಣ ಎಂದು ಹೇಳಿಲಾಗುತ್ತಿದೆ.
ಇತ್ತೀಚಿಗಷ್ಟೇ ರಶೀದ್ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇವರು ತಬಲಾ ವಾದಕರಾಗಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಮೋದ್ ಮುತಾಲಿಕ್ ಇವರ ತಬಲಾ ವಾದನಕ್ಕೆ ಮೆಚ್ಚಿ, ಪುರಸ್ಕರಿಸಿದ್ದರು. ಈ ಫೋಟೋವನ್ನು ರಶೀದ್ ಫೇಸ್ ಬುಕ್ ನಲ್ಲಿ ಹಾಕಿದ್ದರು. ಇದರಿಂದ ಕೆಲ ಮುಸ್ಲಿಮರು ಆಕ್ರೊಶ ವ್ಯಕ್ತಪಿಸಿದ್ದರು.
ಫೇಸ್ ಬುಕ್ ಫೋಟೋ ಅಪ್ಲೋಡ್ ಮಾಡಿದಾಗಿನಿಂದ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಕೊನೆಗೆ ರಶೀದ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಮಂಗಳವಾರ ಪುರದಾಳು ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವಾಗ ಇವರನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ.
ಬೈಕ್ ಗಳಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ನಾಲ್ವರು ಅವಾಚ್ಯ ಶಬ್ದಗಳಿಂದ ರಶೀದ್ ಅವರನ್ನು ನಿಂದಿಸಿದ್ದಾರೆ. ಭಯಗೊಂಡ ರಶೀದ್ ತಕ್ಷಣ ಅಲ್ಲಿಂದ ಹಿಂತಿರುಗಿ ಬಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಗದಗಿನ ಪುಟ್ಟರಾಜ ಗವಾಯಿಗಳ ಪರಂಪರೆಯಲ್ಲಿ ಸಂಗೀತ ಕಲಿತಿರುವ ರಶೀದ್ ಶಿವಮೊಗ್ಗದ ಸಾಂಸ್ಕೃತಿಕ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ. ಶಾಸ್ತ್ರೀಯ ಸಂಗೀತದ ಜತೆ ಅಧುನಿಕ ಸಂಗೀತವನ್ನೂ ಅಭ್ಯಾಸ ಮಾಡಿರುವ ರಶೀದ್ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ.