ಶಿವಮೊಗ್ಗ : ರಸ್ತೆ ಅಪಘಾತ ಪ್ರಕರಣಕ್ಕೆ ತಿರುವು
ಬೆಂಗಳೂರು, ನವೆಂಬರ್ 26 : ಕಾರು ಅಪಘಾತದಲ್ಲಿ ಎಂ.ಲೋಕೇಶ್ ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಕಾರಿನಲ್ಲಿದ್ದ ಮಹಿಳೆ ಲೋಕೇಶ್ ಅವರ ಪತ್ನಿಯಲ್ಲ ಎಂದು ತಿಳಿದುಬಂದಿದ್ದು, ಮಹಿಳೆ ಕಾಣೆಯಾದ ಬಗ್ಗೆ ನ.22ರಂದು ದೂರು ದಾಖಲಾಗಿತ್ತು.
ಶಿವಮೊಗ್ಗದಿಂದ ಸಾಗರಕ್ಕೆ ತೆರಳುವ ರಸ್ತೆಯಲ್ಲಿ ಕುಂಸಿ ಬಳಿ ಶನಿವಾರ ಕಾರು ಅಪಘಾತ ನಡೆದಿತ್ತು. ಅಪಘಾತದಲ್ಲಿ ಇಂಧನ ಸಚಿವರ ಆಪ್ತ ಶಾಖೆಯ ಶಾಖಾಧಿಕಾರಿ ಎಂ.ಲೋಕೇಶ್, ವಿಕಾಸಸೌಧದ ಸಚಿವಾಲಯದ ಹಿರಿಯ ಸಹಾಯಕಿ ನೇತ್ರಾವತಿ ಮೃತಪಟ್ಟಿದ್ದರು.
ಶಿವಮೊಗ್ಗ: ಕಾರು ಪಲ್ಟಿಯಾಗಿ ಸಚಿವ ಡಿ.ಕೆ ಶಿವಕುಮಾರ್ ಆಪ್ತ ಸಾವು
ಮೊದಲು ಎಂ.ಲೋಕೇಶ್ ಜೊತೆ ಕಾರಿನಲ್ಲಿ ಇದ್ದಿದ್ದು ಅವರ ಪತ್ನಿ ಎಂದು ಶಂಕಿಸಲಾಗಿತ್ತು. ನಂತರ ತನಿಖೆ ನಡೆಸಿದಾಗ ಮೃತಪಟ್ಟವರು ನೇತ್ರಾವತಿ (35) ಎಂದು ತಿಳಿದು ಬಂದಿತ್ತು.
ನಾಪತ್ತೆ ಪ್ರಕರಣ : ನೇತ್ರಾವತಿ ಅವರು ಬೆಂಗಳೂರಿನ ವಿಜಯನಗರದ ನಿವಾಸಿ. ಅವರು ನ.22ರಂದು ಮನೆ ಬಿಟ್ಟು ಬಂದಿದ್ದರು. ಪತ್ನಿ ಕಾಣೆಯಾಗಿದ್ದಾರೆ ಎಂದು ಯೋಗೇಶ್ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದರು. ಲೋಕೇಶ್ ಜೊತೆ ತೆರಳಿರಬಹುದು ಎಂದು ಮಾಹಿತಿಯನ್ನು ನೀಡಿದ್ದರು.
ಶನಿವಾರ ಮಧ್ಯಾಹ್ನ ಆಯನೂರು-ಕುಂಸಿ ಮಧ್ಯೆ ರಸ್ತೆ ಅಪಘಾತ ನಡೆದಿತ್ತು. ರಸ್ತೆಯಲ್ಲಿ ಅಡ್ಡ ಬಂದ ಹಸುವನ್ನು ತಪ್ಪಿಸಲು ಹೋಗಿ ಕಾರು ರಸ್ತೆ ಬದಿಯ ಮರ ಮತ್ತು ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಲೋಕೇಶ್, ನೇತ್ರಾವತಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದರು.