ಶಿವಮೊಗ್ಗ: ಗಾಂಜಾ ವಿರುದ್ಧ ಕಾರ್ಯಾಚರಣೆ, 9 ಮಂದಿ ಬಂಧನ
ಶಿವಮೊಗ್ಗ, ಜನವರಿ 04 : ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ನಗರಾದ್ಯಂತ ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆಸಿ ಒಂಭತ್ತು ಜನರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಹಾಗೂ ಎಸ್ ಪಿ ಮುತ್ತುರಾಜ್ ರವರ ಮಾರ್ಗದರ್ಶನದಲ್ಲಿ ಡಿಸಿಬಿ ಇನ್ಸ್ ಪೆಕ್ಟರ್ ಕೆ.ಕುಮಾರ್, ಭದ್ರಾವತಿ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್, ಹಳೆನಗರ ಪೊಲೀಸ್ ಠಾಣೆಯ ಪಿಎಸ್ ಐ ಶಿವಪ್ರಸಾದ್ ಹಾಗೂ ತಂಡದಿಂದ ಭದ್ರಾವತಿ ನಗರಾದ್ಯಂತ ಗಾಂಜಾ ವಿರುದ್ಧ ಕಾರ್ಯಾಚರಣೆ ಮಾಡಿ ಒಂಭತ್ತು ಜನರನ್ನು ಬಂಧಿಸಿದ್ದಾರೆ.
ಅವರಿಂದ ಒಂದೂವರೆ ಕೆ.ಜಿ.ಯಷ್ಟು ಗಾಂಜಾ ಹಾಗೂ 50 ಗಾಂಜಾ ಪೌಚ್ ಗಳನ್ನು ವಶಕ್ಕೆ ಪಡೆದು, ಡಿಸಿಬಿ ಠಾಣೆಯಲ್ಲಿ ಒಂದು ಹಾಗೂ ಭದ್ರಾವತಿ ಹಳೆನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ.
ಈ ಬಾರಿ ಗಾಂಜಾ ಮಾರಾಟ ಮಾಡುತ್ತಿದ್ದವರ ಜೊತೆ ಗಾಂಜಾ ಖರೀದಿಸಿ ಸೇವಿಸುತ್ತಿದ್ದವರ ಮೇಲೂ ಪ್ರಕರಣ ದಾಖಲಿಸಿರುವುದು ವಿಶೇಷ. ಚನ್ನಗಿರಿಯ ಅಬ್ದುಲ್ ಖಾದರ್, ಭದ್ರಾವತಿಯ ಸುರೇಶ ಬಂಧಿತ ಅಂತರಜಿಲ್ಲಾ ಗಾಂಜಾ ಮಾರಾಟಗಾರರಾಗಿದ್ದು, ಇನ್ನೋರ್ವ ಆರೋಪಿ ಬಸವಾಪಟ್ಡಣದ ಹಾಲೇಶ ತಲೆ ಮರೆಸಿಕೊಂಡಿದ್ದಾನೆ.
ಈ ಮಾರಾಟಗಾರರ ಜೊತೆ ಭದ್ರಾವತಿಯ ವಾಸಿಗಳಾದ ಮಂಜ, ರಿಯಾಝ್,ಹೈದರಾಲಿ, ಮಹಮ್ಮದ್ ಇರ್ಫಾನ್, ಫಿರ್ದೋಸ್, ಜಾವೇದ್, ಅಜ್ಜು ರವರನ್ನು ಬಂಧಿಸಿರುವ ಪೊಲೀಸರು,ಪ್ರಕರಣ ದಾಖಲಿಸಿದ್ದಾರೆ. ಇದೇ ಮೊದಲ ಬಾರಿಗೆ ಗಾಂಜಾ ಖರೀದಿಸಿ ಸೇವಿಸುತ್ತಿದ್ದವರ ಮೇಲೂ ಪ್ರಕರಣ ದಾಖಲಿಸಿರುವ ಪೊಲೀಸರ ತಂಡ ಶ್ಲಾಘನೆಗೆ ಪಾತ್ರವಾಗಿದೆ.