ಶಿವಮೊಗ್ಗ ಪೊಲೀಸರಿಗೆ ಸಲಾಂ, ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆ
ಶಿವಮೊಗ್ಗ, ಜೂನ್ 12 : ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲು ಶಿವಮೊಗ್ಗ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪೊಲೀಸರ ಮಾನವೀಯ ಕಾರ್ಯಕ್ಕೆ ಜನರು ಶಹಬ್ಬಾಸ್ ಎಂದು ಹೇಳಿದ್ದಾರೆ.
ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯಿಂದ ರೋಗಿಯನ್ನು ಸ್ಥಳಾಂತರ ಮಾಡಬೇಕಿತ್ತು. ಶಿವಮೊಗ್ಗ ಪೊಲೀಸರು ರೋಗಿಯ ಪತಿಯ ಮನವಿಯಂತೆ ಆಂಬ್ಯುಲೆನ್ಸ್ ಸಾಗುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆಯನ್ನು ಮಂಗಳವಾರ ಮಾಡಿಕೊಟ್ಟು. ಮಾನವೀಯತೆ ಮೆರೆದಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಕಳೆದು ಹೋದ ಮಗು ರಕ್ಷಿಸಿದ ಟ್ರಾಫಿಕ್ ಪೊಲೀಸ್
ಬೆಂಗಳೂರಿನಲ್ಲಿ ಹಲವಾರು ಬಾರಿ ಜೀವಂತ ಹೃದಯ ಸಾಗಣೆ ಮಾಡುವಾಗ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ವಿಐಪಿಗಳು ಸಂಚಾರ ನಡೆಸುವಾಗಲೂ ಉಳಿದ ವಾಹನಗಳ ಸಂಚಾರಕ್ಕೆ ತಡೆ ಹಾಕಲಾಗುತ್ತದೆ.
ಆದರೆ, ಜಿಲ್ಲಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ರೋಗಿಯನ್ನು ಸ್ಥಳಾಂತರ ಮಾಡಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಜನರು ಇದಕ್ಕೆ ಸಹಕಾರ ನೀಡಿದ್ದು, ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಬರಿಗೈನಲ್ಲಿ ಚರಂಡಿ ಸ್ವಚ್ಛಮಾಡಿದ ಪೊಲೀಸ್: ಟ್ವಿಟರ್ನಲ್ಲಿ ಮೆಚ್ಚುಗೆ
ಘಟನೆ ವಿವರ : ಸಾಗರ ತಾಲೂಕಿನ ಮಕ್ಕಿಮನೆಯ ಸುಜಾತಾ (32) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎರಡು ದಿನದಿಂದ ಅವರಿಗೆ ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸೂಚನೆ ನೀಡಿದ್ದರು.
ಸುಜಾತಾ ಅವರನ್ನು ಸರಿಯಾದ ಸಮಯಕ್ಕೆ ಮಣಿಪಾಲಕ್ಕೆ ಕರೆದುಕೊಂಡು ಹೋಗುವುದು ಸವಾಲಾಗಿತ್ತು. ಪತಿ ಪದ್ಮರಾಜ್ ಅವರು ಶಿವಮೊಗ್ಗ ಎಸ್ಪಿ ಅಭಿನವ್ ಖರೇ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಸಹಕಾರ ನೀಡುವಂತೆ ಮನವಿ ಮಾಡಿದ್ದರು.
ಅಭಿನವ್ ಖರೇ ಅವರು ಸುಜಾತಾ ಅವರಿದ್ದ ಆಂಬ್ಯುಲೆನ್ಸ್ ಸಾಗುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲು ಸೂಚನೆ ನೀಡಿದರು. ಸಂಚಾರಿ ಪೊಲೀಸರ ಸಹಕಾರದಿಂದ ನಂಜಪ್ಪ ಆಸ್ಪತ್ರೆಯಿಂದ ತೀರ್ಥಹಳ್ಳಿ ರಸ್ತೆಯ ತನಕ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಆಂಬ್ಯುಲೆನ್ಸ್ ಸಾಗಲು ಅವಕಾಶ ಕಲ್ಪಿಸಲಾಯಿತು.
ಸಂಚಾರಿ ಪೊಲೀಸರು ಕಾರ್ಯಕ್ಕೆ ನಗರದ ಜನರು ಸಹ ಕೈ ಜೋಡಿಸಿದ್ದು, ಆಂಬ್ಯುಲೆನ್ಸ್ ಸಾಗಲು ವ್ಯವಸ್ಥೆ ಮಾಡಿಕೊಟ್ಟರು. ಸುಜಾತಾ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದರು.