ಶಿವಮೊಗ್ಗದ ಮೀನಾಕ್ಷಿ ಭವನ್ ಪಡ್ಡು, ಕಡುಬು ಸವಿಯದ ಜೀವ ವ್ಯರ್ಥವೋ!
ಮೋಡ ಕವಿದಿತ್ತು. ಜಿಟಿ ಜಿಟಿ ಮಳೆ. ಏನಾದರೂ ಕುರುಕುಲು ತಿನ್ನುವ ಚಪಲ. ಆಗೊಮ್ಮೆ - ಈಗೊಮ್ಮೆ ಶಿವಮೊಗ್ಗೆಗೆ ಹೋದಾಗ ಇಲ್ಲಿ ಹೋಗದಿದ್ದರೆ ಮನಸ್ಸು ಬಾಡುತ್ತದೆ. ನಾಲಗೆ ನನ್ನ ಮಾತೇ ಕೇಳುವುದಿಲ್ಲ ಎನ್ನುತ್ತದೆ. ಈ ಹೋಟೆಲ್ ನ ಮುಂದೆ ಬಸ್ಸು ದಾಟಿದಾಗಲೆಲ್ಲಾ ಒಮ್ಮೆ ಜಿಗಿದುಬಿಡಲೇನೋ ಎಂಬ ತುಡಿತ. ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ಮೀನಾಕ್ಷಿ ಭವನ್ ಬಗ್ಗೆಯೇ ಈ ಲೇಖನ.
ಬೆಳಗ್ಗೆ 8 ರಿಂದ ಆರಂಭವಾಗುವ ಈ ಮೀನಾಕ್ಷಿ ಭವನ್ ಶಿವಮೊಗ್ಗದ ಜನರಿಗೆ ಎಂದೂ ಹೋಟೆಲ್ ಎಂದೆನಿಸಿಯೇ ಇಲ್ಲ. ಅದಕ್ಕೆ ಕಾರಣ ಅಲ್ಲಿನ ಪರಿಸರ. ಕಿವಿಗೆ ಇಂಪಾಗಿ ಕೇಳುವ ಸುಬ್ಬಲಕ್ಷ್ಮಿ ಅವರ ಮಧುರ ಗಾಯನ, ಮೂಗಿಗೆ ಘಮ್ಮೆಂದು ಬರುವ ತಿಂಡಿಯ ಘಮ. ರುಚಿಯ ಆಸ್ವಾದ. ಇವೆಲ್ಲವೂ ಒಟ್ಟಾಗಿ ಸೇರಿ ಕಾಯುವ ಬೇಸರವನ್ನೇ ಮರೆಸಿಬಿಡುತ್ತವೆ.
ಮಂಗಳೂರು ಬೋಂಡಾ, ಮಲಬಾರ್ ಪರೋಟಾ, ಬಂಬೂ ಬಿರಿಯಾನಿ!
ಮಸಾಲೆ ದೋಸೆ ಅಂದ ತಕ್ಷಣ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯವರಿಗೂ ನೆನಪಾಗೋದು ಈ ಮೀನಾಕ್ಷಿ ಭವನ್ ಹೋಟೆಲ್. ಈ ಹೋಟೆಲ್ ಶಿವಮೊಗ್ಗದ ಹಳೆಯ ಹೋಟೆಲ್ ಗಳಲ್ಲೇ ಅಗ್ರಮಾನ್ಯ. ಇಲ್ಲಿ ಸಿಗುವ ಮಸಾಲೆ ದೋಸೆ, ಪಡ್ಡು, ಅವಲಕ್ಕಿ ತುಂಬಾ ರುಚಿ. ದೋಸೆ ಜೊತೆ ಇಡ್ಲಿ ವಡೆ, ಪೂರಿ, ಅವಲಕ್ಕಿ ಹೀಗೆ ಬೇರೆ ಬೇರೆ ತಿಂಡಿಗಳೂ ಸಿಗುತ್ತವೆ. ಆದರೆ ಮೀನಾಕ್ಷಿ ಭವನ್ ಮಾತ್ರ ದೋಸೆಗೇ ಫೇಮಸ್.
ಮಲೆನಾಡಿನ ಅಡುಗೆಗಳು ವಿಶೇಷ
ಮಲೆನಾಡಿನ ಅಡುಗೆಗಳು ಅಂದರೆ ಅಲ್ಲಿ ವಿಶೇಷ ಇದ್ದೇ ಇರುತ್ತದೆ. ಹಾಗೆಯೇ ಇಲ್ಲಿಯೂ ಕೂಡ. ಉದ್ದನೆಯ ಕಡುಬು. ಅದಕ್ಕೆ ಹಚ್ಚಿಕೊಳ್ಳಲು ತೆಂಗಿನತುರಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು ಹಾಕಿ ಈಗ ತಾನೇ ರುಬ್ಬಿದಂತಿರುವ ಮೂಗಿಗೆ ಇಂಗಿನ ಘಮ ಸೋಕಿಸುವ ಚಟ್ನಿ. ಇತ್ತ ಈರುಳ್ಳಿ, ಸಬ್ಬಸಿಗೆ, ಒಗ್ಗರಣೆ ಹಾಕಿ ಮಾಡಿದ ರುಚಿ - ರುಚಿ , ಕರಂ ಕುರಂ ಪಡ್ಡು, ದೋಸೆ ಮೇಲೆ ಬೆಣ್ಣೆಯಿದೆಯೋ ಅಥವಾ ದೋಸೆಯನ್ನು ಬೆಣ್ಣೆಯಲ್ಲಿ ಅದ್ದಿ ತಂದರೇನೋ ಎಂದೆನಿಸುವ ಮಸಾಲೆ ಬೆಣ್ಣೆ ದೋಸೆ. ಇತ್ತ ಮಲೆನಾಡಿನ ಮಸಾಲೆಗಳು ಹಾಗೂ ಕಾಯಿ ಹೆಚ್ಚಿಗೆ ಹಾಕಿ, ಮನೆಯಲ್ಲೇ ಮಾಡಿ ಸವಿದಂತೆ ಎನಿಸುವ ಇಡ್ಲಿ- ಸಾಂಬಾರು. ಆಹಾ, ಬಲ್ಲವನೇ ಬಲ್ಲ ಸವಿ ರುಚಿಯಾ!
1930ರಲ್ಲಿ ಶ್ರೀನಿವಾಸ್ ಅಯ್ಯರ್ ಆರಂಭಿಸಿದರು
1930ರಲ್ಲಿ ಶ್ರೀನಿವಾಸ್ ಅಯ್ಯರ್ ಎಂಬುವವರು ಪ್ರಾರಂಭಿಸಿದ ಈ ಮೀನಾಕ್ಷಿ ಭವನ್ ಕೇವಲ ಸಣ್ಣ ಗೂಡಂಗಡಿಯ ಹಾಗಿತ್ತು. ನಂತರದ ದಿನಗಳಲ್ಲಿ ದೋಸೆ ಹಾಗೂ ಪಡ್ಡುವಿಗೆ ಪ್ರಖ್ಯಾತಿ ಪಡೆದಿರುವುದನ್ನು ಇಲ್ಲಿನ ಕೆಲಸಗಾರರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡಿರುವ ಈ ಹೋಟೆಲ್ ಅದೇ ಸ್ವಾದವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಇಲ್ಲಿ ರುಚಿ ನೋಡಿದವರು ಮೊಮ್ಮಕ್ಕಳನ್ನು ಅಜ್ಜ - ಅಜ್ಜಿ , ಮಕ್ಕಳನ್ನು ಅಪ್ಪ - ಅಮ್ಮ ಕರೆತರದೇ ಇರಲಾರರು ಕಣ್ರೀ. ಹಾಗಿರುತ್ತದೆ ಇಲ್ಲಿನ ಸ್ವಾದ.
ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ
ಸಾಧಕರು, ರಾಜಕಾರಣಿಗಳು ಸಹ ಭೇಟಿ ನೀಡ್ತಾರೆ
70 ಜನರು ಏಕಕಾಲದಲ್ಲಿ ಕೂರಬಲ್ಲ ಹೋಟೆಲ್ ನಲ್ಲಿ ಯಾವಾಗಲೂ ಜನರು ಗಿಜಿಗಿಜಿ ಅಂತ ಇದ್ದೇ ಇರುತ್ತದೆ. ಇನ್ನು ವಾರಾಂತ್ಯಗಳಲ್ಲಿ ಬಂದರಂತೂ ಕೇಳಲೇ ಬೇಡಿ. 15ಕ್ಕೂ ಹೆಚ್ಚು ಪಾಕ ತಜ್ಞರು ನಿತ್ಯವೂ ಇಲ್ಲಿ ಅಡುಗೆ ಮಾಡುತ್ತಾರೆ. ಮಧ್ಯಾಹ್ನ ಊಟದ ಮೆನು ಕೂಡ ಅತ್ಯುದ್ಬುತ. ಬೆಲ್ಲ ಹಾಕಿದ ಪಾಯಸ, ಕಾಯಿ ಹಾಲು, ತರಹೇವಾರಿ ಪಲ್ಯಗಳು, ಅಪ್ಪಟ ಬ್ರಾಹ್ಮಣ ಶೈಲಿಯ ಹುಳಿ, ಸಾರು. ರಾಜಕಾರಣಿಗಳು, ಸಾಧಕರು, ಚಿತ್ರನಟರೆಲ್ಲರೂ ಶಿವಮೊಗ್ಗಕ್ಕೆ ಬಂದರೆ ಇಲ್ಲಿಗೆ ಭೇಟಿ ನೀಡದೆ ಹೋಗಲಾರರು. ಯಡಿಯೂರಪ್ಪ, ಬಂಗಾರಪ್ಪ, ಈಶ್ವರಪ್ಪ ಹೀಗೆ ಎಲ್ಲರ ಅಚ್ಚುಮೆಚ್ಚಾಗಿದೆ ಈ ಮೀನಾಕ್ಷಿ ಭವನ್.
ಕಷಾಯ ಕುಡಿಯುವುದು ಮರೆಯದಿರಿ
ದಿನವೊಂದರಲ್ಲಿ 15 ರುಪಾಯಿಗೆ ಒಂದರಂತೆ 200 ಪ್ಲೇಟ್ ಅಂದಾಜು 400 ಇಡ್ಲಿಗಳು ಸಿದ್ಧವಾದರೆ, 300 ಮಸಾಲೆ ದೋಸೆ, 500 ವಡೆ ದಿನವೂ ತಯಾರಾಗುತ್ತದೆ. ಇನ್ನು ಪಡ್ಡು, ಉಪ್ಪಿಟ್ಟು, ಕಡುಬು, ಅವಲಕ್ಕಿ, ವಾಂಗೀಬಾತ್ ಕೂಡ ಈ ಹೋಟೆಲ್ ನ ಟಾಪ್ ಸೆಲ್ಲಿಂಗ್ ಐಟಮ್ಸ್. ಇಲ್ಲಿ ತಿಂದಷ್ಟು ಬಾರಿಯೂ ರುಚಿ ಹೆಚ್ಚಾದಂಥ ಅನುಭವ. ಅಂಥದ್ದೊಂದು ತಿನಿಸನ್ನು ಹುಡುಕಿಕೊಂಡು ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಅದು ಇಷ್ಟವಾಗುತ್ತದೆ ಎಂಬುದು ಗ್ರಾಹಕರ ಅಭಿಪ್ರಾಯ. ಇಲ್ಲಿ ಹೋದಾಗ ಕಷಾಯವನ್ನು ಕೂಡ ರುಚಿ ನೋಡಿ ಎಂದು ಸಲಹೆ ಮಾಡುವವರೇ ಹೆಚ್ಚು.