ಶಿವಮೊಗ್ಗ ಲೋಕಸಭಾ ಕ್ಷೇತ್ರ : ಅಭ್ಯರ್ಥಿ ಆಯ್ಕೆ ಬಗ್ಗೆ ಗೌಡ್ರ ಗೊಂದಲ
Recommended Video
ಶಿವಮೊಗ್ಗ, ಅಕ್ಟೋಬರ್ 10 : ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ? ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಒಮ್ಮತ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಅಥವಾ ಕಾಂಗ್ರೆಸ್ಸಿಗೆ ಸೀಟನ್ನು ಬಿಟ್ಟುಕೊಡಲು ಜೆಡಿಎಸ್ ಮುಂದಾಗಿದೆಯೇ? ಚರ್ಚೆ, ಗೊಂದಲ ಇನ್ನು ಮುಂದುವರೆದಿದೆ.
ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಆದರೆ, ಅದಕ್ಕೆ ಒಂದು ಷರತ್ತಿನ ಕೊಂಡಿ ಸಿಲುಕಿಸಿದ್ದಾರೆ. ಸದ್ಯ ವಿದೇಶದಲ್ಲಿರುವ ಮಧು ಬಂಗಾರಪ್ಪ ಅವರು ಭಾರತಕ್ಕೆ ಬಂದ ಬಳಿಕ, ಅವರನ್ನು ಸಂಪರ್ಕಿಸಲಾಗುವುದು.
ಉಪ ಚುನಾವಣೆ : ಉಸ್ತುವಾರಿಗಳನ್ನು ನೇಮಿಸಿದ ಕರ್ನಾಟಕ ಬಿಜೆಪಿ
ಮಧು ಬಂಗಾರಪ್ಪ ಅವರು ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದರೆ, ಜೆಡಿಎಸ್ ಈ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಿದೆ ಎಂದು ದೇವೇಗೌಡರು ಇಂದು ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಪ್ರವಾಸದಲ್ಲಿರುವ ದೇವೇಗೌಡರು ಮಾತನಾಡಿ, ಮಧು ಒಪ್ಪದಿದ್ದರೆ ಕಾಂಗ್ರೆಸ್ ಜತೆ ಚರ್ಚಿಸಿ ಬೇರೆ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಆಗ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದರು.
ಮಧು ಬಂಗಾರಪ್ಪ ಅವರಿಗೆ ಆಸಕ್ತಿ ಇಲ್ಲ
ಜೆಡಿಎಸ್ ನಿಂದ ಕಳೆದ ಬಾರಿ ಚುನಾವಣೆ ಸ್ಪರ್ಧಿಸಿ ಸೋಲು ಕಂಡಿದ್ದ ಗೀತಾ ಶಿವರಾಜ್ ಕುಮಾರ್ ಹಾಗೂ ಅವರ ಸೋದರ ಮಧು ಬಂಗಾರಪ್ಪ ಇಬ್ಬರಿಗೂ ಈ ಬಾರಿ ಸ್ಪರ್ಧಿಸುವ ಅವಕಾಶ ಒದಗಿ ಬಂದಿತ್ತು. ಆದರೆ, ಇಬ್ಬರೂ ಕೂಡಾ ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಮಧು ಅವರು ಬಹುತೇಕ ಸ್ಪರ್ಧಿಸುವುದಿಲ್ಲ. ಅತ್ತ ಕಾಂಗ್ರೆಸ್ ನಲ್ಲೂ ಪ್ರಮುಖ ಸ್ಪರ್ಧಿ ಇನ್ನೂ ಸಿಕ್ಕಿಲ್ಲ. ಹೀಗಾಗಿ, ಮೈತ್ರಿಕೂಟಕ್ಕೆ ಅಭ್ಯರ್ಥಿ ಆಯ್ಕೆ ಇನ್ನೂ ಗೊಂದಲವಾಗಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಖಚಿತ
ಕಾಂಗ್ರೆಸ್ಸಿಗೆ ಸೂಕ್ತ ಅಭ್ಯರ್ಥಿ ಸಿಗುತ್ತಿಲ್ಲ
ಕಳೆದ ಬಾರಿ ಸ್ಪರ್ಧಿಸಿದ್ದ ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ರಾಜ್ಯ ವಕ್ತಾರ ಕೆ ದಿವಾಕರ್, ಜಿಲ್ಲಾಧ್ಯಕ್ಷ ಟಿ.ಎನ್ ಶ್ರೀನಿವಾಸ್ ಅಲ್ಲದೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ ಅವರ ಫ್ಯಾಮಿಲಿಗೂ ಟಿಕೆಟ್ ನೀಡುವ ಆಫರ್ ನೀಡಲಾಗಿದೆ. ಆದರೆ, ಯಾರೊಬ್ಬರೂ ಮುಂದಾಗುತ್ತಿಲ್ಲ.
ಶಿವಮೊಗ್ಗದ ಮಂಜುನಾಥ ಭಂಡಾರಿ ಪರಿಚಯ
ಬಿ.ವೈ.ರಾಘವೇಂದ್ರ ಹೆಸರು ಘೋಷಣೆ
ಬಿ.ಎಸ್.ಯಡಿಯೂರಪ್ಪ ಅವರು ಬಿ.ವೈ.ರಾಘವೇಂದ್ರ ಹೆಸರು ಘೋಷಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಎಂ.ಬಿ.ಭಾನುಪ್ರಕಾಶ್, ದತ್ತಾತ್ರಿ ಸೇರಿದಂತೆ ಹಲವು ನಾಯಕರು ಆಕಾಂಕ್ಷಿಗಳಾಗಿದ್ದರು. ಆದರೆ, ಯಡಿಯೂರಪ್ಪ ಏಕಾಏಕಿ ಪುತ್ರನ ಹೆಸರನ್ನು ಘೋಷಣೆ ಮಾಡಿದರು. ಆದ್ದರಿಂದ, ರಾಘವೇಂದ್ರ ಅವರು ಒಮ್ಮತದ ಅಭ್ಯರ್ಥಿಯೇ? ಎಂಬ ಅನುಮಾನ ಉಂಟಾಗಿದೆ. ಆದರೆ, ಇತರೆ ಪಕ್ಷಗಳಲ್ಲಿನ ಅಭ್ಯರ್ಥಿ ಆಯ್ಕೆ ಗೊಂದಲ ಗಮನಿಸಿದರೆ, ರಾಘವೇಂದ್ರ ಅವರಿಗೆ ಈ ಬಾರಿ ಗೆಲುವಿನ ಹಾದಿ ಸುಗುಮಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಬಿ.ವೈ.ರಾಘವೇಂದ್ರಗೆ ಚುನಾವಣೆ ಹೊಸದಲ್ಲ
ಬಿ.ವೈ.ರಾಘವೇಂದ್ರ ಅವರು 2009-2014ರ ತನಕ ಶಿವಮೊಗ್ಗ ಸಂಸದರಾಗಿದ್ದರು. ಸತತ ಎರಡು ಚುನಾವಣೆಗಳನ್ನು ಎದುರಿಸಿದ ಅನುಭವ ಅವರಿಗೆ ಇದೆ. ಸುಮಾರು 10 ವರ್ಷಗಳಿಂದ ಕ್ಷೇತ್ರದ ಮೇಲೆ ಅವರ ಕುಟುಂಬವೇ ಹಿಡಿತವನ್ನು ಹೊಂದಿದೆ.
ನ.3ರಂದು ಉಪ ಚುನಾವಣೆ ನಡೆಯಲಿದ್ದು, 6ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆದ್ದವರ ಅಧಿಕಾರಾವಧಿ ಸುಮಾರು ನಾಲ್ಕು ತಿಂಗಳು. ಆದರೂ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ದವಾಗಬೇಕಿದೆ.
ಹಿರಿಯ ಕಾಂಗ್ರೆಸ್ಸಿಗರ ನಿರಾಸಕ್ತಿ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಶಿವಮೊಗ್ಗ ಕ್ಷೇತ್ರ ಯಾವ ಪಕ್ಷಕ್ಕೆ ಸಿಕ್ಕರೂ ಸರಿಯೇ. ಒಂದು ವೇಳೆ ಜೆಡಿಎಸ್ಗೆ ಸಿಕ್ಕರೆ ನಾವು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರೂ, ಮಾಜಿ ಸಚಿವರೂ ಆದ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ ಅವರು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಯಾರಿಗೂ ಬೇಕಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಬೇಕಿದೆ. ಇಲ್ಲಿನ ಪರಿಸ್ಥಿತಿ ತಿಳಿಯಲು ಒಂದು ಪರೀಕ್ಷೆ ನಡೆಯಬೇಕಿತ್ತು. ಅದಕ್ಕಾಗಿಯೇ ಇಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಸಲಾಗುತ್ತಿದೆ ಎಂದಿದ್ದಾರೆ.