ಶಿವಮೊಗ್ಗ ದಸರಾ ಹಬ್ಬಕ್ಕೆ ಚಾಲನೆ ನೀಡಿದ ಸುಕ್ರಿ ಬೊಮ್ಮಗೌಡ
ಶಿವಮೊಗ್ಗ, ಸೆ.21: ಇಲ್ಲಿನ ಕೋಟೆ ಶ್ರೀಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಗುರುವಾರ ಬೆಳಗ್ಗೆ ನಾಡಹಬ್ಬ ದಸರಾಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಮಲೆನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಹತ್ತು ದಿನಗಳ ದಸರಾ ಮಹೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದೆ.
In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್,ಪಾಲಿಕೆ ಮೇಯರ್ ಏಳುಮಲೈ ಬಾಬು, ಉಪ ಮೇಯರ್ ರೂಪಾ ಲಕ್ಷ್ಮಣ್, ಆಯುಕ್ತ ಮುಲ್ಲೈ ಮುಹಿಲನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ದಸರಾವನ್ನು ಆಚರಿಸುವ ಮಹಾನಗರ ಪಾಲಿಕೆಗೆ ಸರ್ಕಾರವು ಈ ವರ್ಷವು ಒಂದು ಕೋಟಿ ರೂ. ಅನುದಾನ ನೀಡಿದೆ. ಸೆ. 21 ರಿಂದ ಸೆ 30ರ ತನಕ ದಸರಾ ಮಹೋತ್ಸವ ನಗರದ ವಿವಿಧೆಡೆ ಆಚರಿಸಲ್ಪಡುತ್ತದೆ.
ಅಂತಿಮ ದಿನದಂದು ಶಿವಪ್ಪ ನಾಯಕ ಅರಮನೆಯಿಂದ ಆರಂಭವಾಗುವ ಅಂತಿಮ ದಿನದ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ಥಬ್ದ ಚಿತ್ರಗಳು, ಕಲಾಮೇಳಗಳು, ಸಕ್ರೆಬೈಲು ಆನೆಗಳು ಪಾಲ್ಗೊಳ್ಳಲಿವೆ. ದಸರಾ ಉದ್ಘಾಟನೆ ಚಿತ್ರಗಳನ್ನು ಮುಂದೆ ನೋಡಿ..
ಸುಕ್ರಿ ಬೊಮ್ಮಗೌಡ
ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸಿ. ದಸರಾ ಉದ್ಘಾಟಿಸಿ ಮಾತನಾಡಿದ ಸುಕ್ರಿ ಬೊಮ್ಮಗೌಡ, ಮೈಸೂರಿನಂತೆ ಶಿವಮೊಗ್ಗದಲ್ಲೂ ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಪ್ರತಿ ವರ್ಷ ನಾಡಹಬ್ಬ ದಸರಾ ಇದೇ ರೀತಿ ಅದ್ದೂರಿಯಾಗಿ ನಡೆಯಲಿ ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್
ಶಿವಮೊಗ್ಗ ಸಾಂಸ್ಕೃತಿಕ ತವರೂರು. ಧಾರ್ಮಿಕತೆ ಹಾಗೂ ಸಂಸ್ಕೃತಿಗೆ ಹೆಸರಾಗಿದೆ. ಇಲ್ಲಿ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಶಿವಮೊಗ್ಗ ದಸರಾ ರಾಜ್ಯದಲ್ಲಿ ಪ್ರಸಿದ್ದಿ ಪಡೆಯುತ್ತಿದೆ. 9 ದಿನಗಳ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ನಗರಪಾಲಿಕೆ ಮುಂದಾಗಿದೆ. ಸರ್ಕಾರ ಕೂಡ ದಸರಾ ಹಬ್ಬಕ್ಕೆಂದು 1 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.
ರೈತರಿಗೆ ಸುಖ ಕರುಣಿಸಲಿ
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ತಾಯಿ ಚಾಮುಂಡೇಶ್ವರಿ ನಾಡಿಗೆ ಸುಖ, ಸಮೃದ್ದಿ ಕರುಣಿಸಲಿ, ಉತ್ತಮ ಮಳೆ ಬಂದು ಕೆರೆ-ಕಟ್ಟೆ, ಜಲಾಶಯಗಳು ಭರ್ತಿಯಾಗುವುದರ ಮೂಲಕ ನಾಡಿನ ಜನತೆಗೆ ಹಾಗೂ ರೈತರಿಗೆ ಸುಖ ಕರುಣಿಸಲಿ ಎಂದರು. ಪಾಲಿಕೆ ಮೇಯರ್ ಏಳುಮಲೈ ಬಾಬು ಮಾತನಾಡಿ, ಜನತೆಯ ಸಹಕಾರದಿಂದ ಪ್ರತಿ ವರ್ಷ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಸಾಂಸ್ಕೃತಿಕ ಕಲಾ ವೈಭವ
ಸೆ. 25ರಂದು ಅಜಯ್ ವಾರಿಯರ್, ಶಮಿತಾ ಮಲ್ನಾಡ್ ಹಾಗೂ ಸೆ. 29ರಂದು ವಿಜಯ್ ಪ್ರಕಾಶ್ ಅವರು ಗಾನಸುಧೆ ಹರಿಸಲಿದ್ದಾರೆ.
ನೆಹರೂ ಮೈದಾನದಲ್ಲಿ ಮಕ್ಕಳು ಹಾಗೂ ವಿಶೇಷ ಚೇತನರಿಗೆ ಕ್ರೀಡಾ ಕೂಟ ಹಮ್ಮಿಕೊಳ್ಳಲಾಗಿದೆ. ಜತೆಗೆ ಆಹಾರ ಮೇಳ ಕೂಡಾ ನಡೆಯಲಿದೆ .
ಕುವೆಂಪು ರಂಗ ಮಂದಿರದಲ್ಲಿ ಯೋಗ ಪ್ರದರ್ಶನ, ಕೃಷಿ ಮೇಳ ನಡೆಯಲಿದೆ. ಅಂಬೇಡ್ಕರ್ ಭವನದಲ್ಲಿ ನಾಟಕ ಪ್ರದರ್ಶನವಿರುತ್ತದೆ.