ಶಿವಮೊಗ್ಗದ ಸುಸಂಸ್ಕೃತ ಗ್ರಾಮ ಮತ್ತೂರಲ್ಲಿ ಇದೆಂಥ ಅನಿಷ್ಟ!
ಶಿವಮೊಗ್ಗ, ಮೇ, 04: ಲೋಕ ಕಲ್ಯಾಣಕ್ಕೆಂದು ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ಹಮ್ಮಿಕೊಂಡಿದ್ದ ಸೋಮಯಾಗದಲ್ಲಿ ಮೇಕೆಗಳನ್ನು ಬಲಿ ಕೊಡಲಾಗಿದ್ದೂ ಅಲ್ಲದೇ ಸಾರ್ವಜನಿಕವಾಗಿ ಬ್ರಾಹ್ಮಣರು ಮಾಂಸ ಭಕ್ಷಣೆ ಮಾಡಿ, ಸೋಮರಸ ಸೇವಿಸಿದ ಪ್ರಸಂಗ ಬೆಳಕಿಗೆ ಬಂದಿದೆ.
ಮತ್ತೂರು ಹೊರವಲಯದ ಶ್ರೀಕಂಠಪುರ (ತಮಿಳರ ಕ್ಯಾಂಪ್) ಅಡಿಕೆ ಕಣದಲ್ಲಿ ಏ. 22ರಿಂದ 27ರವರೆಗೆ ನಡೆದ ಯಾಗದಲ್ಲಿ 8 ಆಡುಗಳನ್ನು ಬಲಿಕೊಡಲಾಗಿದೆ. ಈ ಯಾಗಕ್ಕೆ ಸಂಬಂಧಿಸಿದ ಆಡಿಯೊ ಹಾಗೂ ವಿಡಿಯೊ ತುಣುಕುಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.[ಮೈಸೂರು : ಕಪ್ಪಾಡಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ]
ಯಾಗದ ಹೋಮ ಕುಂಡಕ್ಕೆ ಮೇಕೆ ಮಾಂಸ ಅರ್ಪಣೆ ಮಾಡಲಾಗಿದ್ದು ನಂತರ ಪ್ರಸಾದದ ರೂಪದಲ್ಲಿ ಮಾಂಸ ಭಕ್ಷಣೆ ಮಾಡಿ ಸೋಮರಸ ಸೇವನೆ ಮಾಡಲಾಗಿದೆ. ಸಂಕೇತಿ ಬ್ರಾಹ್ಮಣರ ಈ ಕ್ರಮಕ್ಕೆ ಅವರ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಿದೆ.
ಅಗ್ನಿಕುಂಡದ ಬಳಿಯೇ ಆಡು ತಂದು ಪೂಜಿಸಿದ ನಂತರ, ಅದು ಅರಚದಂತೆ ಬಾಯಿ ಬಿಗಿಯಾಗಿ ಕಟ್ಟಿ, ಬಲಿಕೊಡುತ್ತಾರೆ. ನಂತರ ಆಡಿನ ಒಂದೊಂದೆ ಅಂಗ ಬೇರ್ಪಡಿಸಿ, ಅಗ್ನಿಗೆ ಆಹುತಿ ನೀಡಲಾಗುತ್ತದೆ. ಹೋಮ ಕುಂಡದಲ್ಲಿ ಹದವಾಗಿ ಬೆಂದ ಮಾಂಸವನ್ನು ಋತ್ವಿಜರು (ಯಜ್ಞ ನಡೆಸಿಕೊಡುವ ಮುಖ್ಯ ಪುರೋಹಿತರು) ಸೇರಿದಂತೆ ಯಾಗದಲ್ಲಿ ಭಾಗವಹಿಸಿದ್ದ ಭಕ್ತರು ಸೇವಿಸುತ್ತಾರೆ. ಮಾಂಸ ಸೇವನೆಗೂ ಮುನ್ನ ಮೊದಲೇ ಸಂಗ್ರಹಿಸಿಟ್ಟಿದ್ದ ಸೋಮರಸ (ಬಟ್ಟಿ ಇಳಿಸಿದ ಹೆಂಡ) ಕುಡಿಯುತ್ತಾರೆ.
ಯಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜ್ಯದ 17 ಋತ್ವಿಜರು ಭಾಗವಹಿಸಿ, ಹಗಲು-ರಾತ್ರಿ ಸರದಿಯ ಮೇಲೆ ಈ ಯಾಗ ನಡೆಸಿದ್ದರು. ಕೆಲ ರಾಜಕಾರಣಿಗಳು ತಮ್ಮ ರಾಜಕೀಯ ಬಲ ವೃದ್ಧಿಸಿಕೊಳ್ಳಲು, ಅಧಿಕಾರ ಹಿಡಿಯಲು ಬೇಕಾದ ಶಕ್ತಿ, ಅದೃಷ್ಟ ಹೊಂದಲು, ಭಯ ನಿವಾರಣೆಗಾಗಿ ಬ್ರಾಹ್ಮಣರ ಮೂಲಕ ಸೋಮಯಾಗ ಮಾಡಿಸುತ್ತಾರೆ ಎನ್ನುವ ಪ್ರತೀತಿಯೂ ಇದೆ.[ಸೊರಬದಲ್ಲಿ ವಿಚಿತ್ರ ಮಂಗನ ಕಾಯಿಲೆ]
'ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ಅವರಿಗೆ ಅಧಿಕಾರ ತಪ್ಪಿಸುವ ಕಾರಣಕ್ಕಾಗಿ ಮತ್ತೂರಿನಲ್ಲಿ ಸೋಮಯಾಗ ನಡೆಸಿ, ನೂರಾರು ಆಡುಗಳನ್ನು ಬಲಿಕೊಟ್ಟಿದ್ದರು. ಈ ವಿಚಾರವಾಗಿ ಸಂಕೇತಿ ಬ್ರಾಹ್ಮಣರೇ ಆಗಿದ್ದ ಗಮಕಿ ದಿ. ಮತ್ತೂರು ಕೃಷ್ಣಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಯನ್ನೂ ಮಾಡಿದ್ದರು. ಆಗ ಕೆಲವು ವರ್ಷ ಸ್ಥಗಿತಗೊಂಡಿದ್ದ ಇಂತಹ ಮೌಢ್ಯದ ಆಚರಣೆ ಈಗ ಮತ್ತೆ ಗರಿಗೆದರಿದೆ.[ಬಕ್ರೀದ್ 'ಕುರ್ಬಾನಿ' ಬೆಲೆ ಕಾರಿಗಿಂತ ಜಾಸ್ತಿ]
'ಯಾಗಕ್ಕೆ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಸಮುದಾಯದ ಬಹುಪಾಲು ಬ್ರಾಹ್ಮಣರು ವಿರೋಧ ವ್ಯಕ್ತಪಡಿಸಿದರೂ, ಲೆಕ್ಕಿಸದೆ ಪ್ರಾಣಿ ಬಲಿ ನೀಡಲಾಗಿದೆ' ಎಂದು ಹೇಳಲಾಗಿದೆ.
ಪ್ರಾಣಿ ಬಲಿ ನಡೆದಿಲ್ಲ: ಯಾಗದಲ್ಲಿ ಪ್ರಾಣಿ ಬಲಿ ನಡೆದಿಲ್ಲ. ಇದು ವಿರೋಧಿಗಳ ಕೃತ್ಯ. ಆಡನ್ನು ಕಟ್ಟಿದ ಮಾತ್ರಕ್ಕೆ ಬಲಿ ಕೊಟ್ಟಿಲ್ಲ. ಆಡನ್ನು ಕಂಬಕ್ಕೆ ಕಟ್ಟಿ ಪೂಜೆ ಮಾಡಲಾಗಿದೆ. ಗಾಳಿ ಸುದ್ದಿ ಹಬ್ಬಿಸುವ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಯಾಗದ ನೇತೃತ್ವ ವಹಿಸಿಕೊಂಡಿದ್ದ ಸನತ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.