ಶಿವಮೊಗ್ಗ ಬಿಜೆಪಿಯಲ್ಲಿ ಟಿಕೆಟ್ ರಾಜಕೀಯ, ಕಣ್ಣೀರಿಟ್ಟ ಕೆ.ಎಸ್.ಈಶ್ವರಪ್ಪ
Recommended Video
ಶಿವಮೊಗ್ಗ, ಫೆಬ್ರವರಿ 15: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ತಾರಕಕ್ಕೆ ಏರಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಬೆಂಬಲಿಗರು ಬುಧವಾರ ರಾತ್ರಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ, ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವುದು ಬೇಡ. ರುದ್ರೇಗೌಡರಿಗೆ ಈ ಬಾರಿ ಟಿಕೆಟ್ ನೀಡಿ ಎಂದು ಒತ್ತಾಯಿಸಿದ್ದಾರೆ.
'ಸರಕಾರದಿಂದ ಬಹಮನಿ ಉತ್ಸವ ನಡೆಸ್ತಿರೋದು ಸಿದ್ದರಾಮಯ್ಯಗೆ ಗೊತ್ತಿಲ್ಲ'
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿಳಕಿ ಕೃಷ್ಣಮೂರ್ತಿ, ಕೆ.ಎಸ್.ಈಶ್ವರಪ್ಪ ಕುರಿತಂತೆ ಹಗುರವಾದ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಅವರ ಹೇಳಿಕೆಗಳು ಇದೀಗ ಬಿಜೆಪಿಯಲ್ಲಿ ಆಂತರಿಕ ಕಲಹ ಹುಟ್ಟುಹಾಕಿದೆ.
ಚುನಾವಣೆ ಸಂದರ್ಭದಲ್ಲಿ ಟಿಕೆಟ್ ವಿಷಯದಲ್ಲಿ ಗೊಂದಲ ಮೂಡಿಸಿದ್ದರೆ, ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಬಣಗಳ ನಡುವೆ ಗೊಂದಲ ತಿಳಿಯಾಗಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.
ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಪತ್ರಕರ್ತರು ಈ ಘಟನೆ ಕುರಿತಂತೆ ಹಾಗೂ ಬಿಳಕಿ ಕೃಷ್ಣಮೂರ್ತಿ ಹೇಳಿಕೆ ಕುರಿತಂತೆ ಪ್ರಶ್ನಿಸಿದರು. ಆಗ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿಯೇ ಗದ್ಗದಿತರಾಗಿ ಕಣ್ಣೀರು ಹಾಕಿದರು. ಭಾವೋದ್ವೇಗಕ್ಕೆ ಒಳಗಾದ ಅವರು ಪತ್ರಿಕಾಗೋಷ್ಠಿಯಿಂದ ಹೊರನಡೆದರು.
ಬಿಳಕಿ ಕೃಷ್ಣಮೂರ್ತಿ ನೀಡಿದ ಹೇಳಿಕೆ ನನಗೆ ನೋವು ತಂದಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಇದರಲ್ಲಿ ಅನುಮಾನವಿಲ್ಲ. ಆದರೆ ಬಿಳಕಿ ಕೃಷ್ಣಮೂರ್ತಿ ನೀಡಿದ ಹೇಳಿಕೆಯಿಂದ ನನಗೆ ಮಾತ್ರವಲ್ಲ, ಪಕ್ಷದ ಸಂಘಟನೆಗೆ ಮಾಡಿದ ಅಪಮಾನವಾಗಿದೆ ಎಂದರು.
ನೊಂದ ಕಾರ್ಯಕರ್ತರು ನನಗೆ ಕರೆ ಮಾಡುತ್ತಿದ್ದಾರೆ. ಮುಂದೆ ಏನಾಗುತ್ತದೋ ನೋಡೋಣ. ಬಿಳಕಿ ಕೃಷ್ಣಮೂರ್ತಿ ಬಳಸಿದ ಪದ, ನಡೆದುಕೊಂಡ ರೀತಿ ನನ್ನ ಜೀವನದಲ್ಲಿ ನಿರೀಕ್ಷೆ ಮಾಡಿರಲಿಲ್ಲ. ಇದನ್ನು ಯಾರು ಗಮನಿಸುತ್ತಾರೋ ಕಾದು ನೋಡಬೇಕಷ್ಟೆ ಎಂದು ಉತ್ತರಿಸಿ ಹೊರನಡೆದರು.