'ಪತ್ರಿಕೆಗಳು ಜಾತಿ, ಧರ್ಮ,ವ್ಯಕ್ತಿ, ದೇವರಿಗೆ ಮೀಸಲಾಗಬಾರದು'
ಸಾಗರ, ನವೆಂಬರ್ 13: ಪತ್ರಿಕೆಗಳು ಕೆಲವೇ ಕೆಲವು ಜಾತಿ, ಧರ್ಮ, ದೇವರು ಹಾಗೂ ಪಕ್ಷಗಳಿಗೆ ಮೀಸಲಾಗಬಾರದು, ಸುದ್ದಿಗಳು ಹಾಗೂ ಲೇಖನಗಳು ಸೀಮಿತವಾಗದ ಪತ್ರಿಕೆಗಳು ಇಂದು ಬಹಳ ಮುಖ್ಯವಾದದ್ದು ಎಂದು ಸಾಹಿತಿ ಡಾ. ನಾ ಡಿಸೋಜಾ ಅಭಿಪ್ರಾಯಪಟ್ಟರು.
ಸಾಗರದಲ್ಲಿ ಸಂಪದ ಫೌಂಡೇಶನ್ ಮತ್ತು ಸಂಪದ ಸಾಲು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕತೆ, ಕವನ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಿಕೆಗಳು ಇನ್ನೊಬ್ಬರಿಗೆ ಸ್ಫೂರ್ತಿ ನೀಡುವಂತಿರಬೇಕು, ಯಾವುದೋ ಪಕ್ಷ, ಯಾವುದೋ ವ್ಯಕ್ತಿಗೆ ಸೀಮಿತವಾದರೆ ಜನರಿಗೆ ತಲುಪಬೇಕಾದ ಮಾಹಿತಿಗಳಲ್ಲಿ ಸತ್ಯ ಉಳಿಯುವುದಿಲ್ಲ ಎಂದು ಹೇಳಿದರು.
ಬರವಣಿಗೆಗಳು ಇನ್ನೊಬ್ಬರಿಗೆ ಸ್ಪೂರ್ತಿ ನೀಡುವಂತಿರಬೇಕು ಆಗ ಮಾತ್ರಾ ಆ ಬರವಣಿಗೆ ಮತ್ತು ಪತ್ರಿಕೆಗಳಿಗೆ ಬೆಲೆ ಬರುತ್ತದೆ ಎಂದು ಮಥನ ಹೋಮ್ ಇಂಡಸ್ಟ್ರೀಸ್ ನ ಬಿ. ಆರ್. ಉಮೇಶ್ ಹೇಳಿದರು.
ಕತೆಗೆ ಪ್ರಥಮವಾಗಿ ಮಂಜುನಾಥ ಹಿಲಿಯಾಣ ಅವರ ಸೀತಾ ಪ್ರಲಾಪ ಕತೆ, ವಿಷ್ಣು ಭಟ್ ಹೊಸ್ಮನೆ ಅವರ ಪಯಣ ಕತೆಗೆ ದ್ವಿತೀಯ ಬಹುಮಾನ, ಹೆಚ್ ಎಸ್ ಅರ್ಪಣಾ ಅವರ ಪಂಕ್ತಿಬೇಧ ಕತೆಗೆ ತೃತೀಯ ಬಹುಮಾನ ನೀಡಲಾಗಿದೆ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನ ಮಾಡಲಾಯಿತು.
ಡಾ.ರತ್ನಾಕರ್ ಮಲ್ಲಮೂಲೆ ಅವರ ಭೂತ ಕವಿತೆ ಪ್ರಥಮ ಬಹುಮಾನವಾಗಿ, ವಿನಾಯಕ ಅರಳಸುರಳಿ ಅವರ ದೇವರ ಹೊತ್ತವನು ಕವನ ದ್ವಿತೀಯ ಬಹುಮಾನವಾಗಿ, ಡಾ. ಅಜಿತ್ ಹೆಗಡೆ, ಹರೀಶಿ ಅವರ ವೇದಾಂತದ ವಿಗತ ಕವನಕ್ಕೆ ತೃತೀಯ ಬಹುಮಾನ ಸಂದಿವೆ.
ಸಂಪದ ಸಾಲು ಪತ್ರಿಕೆಯ ಹನ್ನೊಂದನೇ ವರ್ಷದ ವಿಶೇಷದ ಸಂದರ್ಭದಲ್ಲಿ ನೆಡೆದ ಈ ಕತೆ, ಕವನ ಸ್ಪರ್ಧೆಯಲ್ಲಿ ರಾಜ್ಯ ಮತ್ತು ಬೇರೆ ರಾಜ್ಯ, ರಾಷ್ಟ್ರದಲ್ಲಿರುವ ಕನ್ನಡಿಗರು ಸೇರಿದಂತೆ 1819 ಕವನಗಳು ಮತ್ತು 819 ಕತೆ ಭಾಗವಹಿಸಿದ್ದವು. ಡಾ.ನಾ ಡಿಸೋಜ ಅವರ ನೇತೃತ್ವದಲ್ಲಿ ತೀರ್ಪು ಪ್ರಕಟಿಸಲಾಗಿತ್ತು.