ರಾಯಣ್ಣ ಬ್ರಿಗೇಡ್ ಈಶ್ವರಪ್ಪ ಮುಖವಾಡ: ಮೊಯಿಲಿ ಟಾಂಗ್
ಶಿವಮೊಗ್ಗ, ಆಗಸ್ಟ್ 22: ಅನಾಥ ಪ್ರಜ್ಞೆಯಿಂದ ಬಳಲುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖವಾಡ ಇದ್ದ ಹಾಗೆ. ಆ ಬ್ರಿಗೇಡ್ ನಿಂದ ಕಾಂಗ್ರೆಸ್ ಗೆ ಯಾವ ತೊಂದರೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ-ಸಂಸದ ಎಂ.ವೀರಪ್ಪ ಮೊಯಿಲಿ ಟಾಂಗ್ ನೀಡಿದ್ದಾರೆ.
ಬಿಜೆಪಿಯ ಪ್ರಮುಖ ನಾಯಕರಾಗಿರುವ ಈಶ್ವರಪ್ಪನವರಿಗೆ ಅವರ ಪಕ್ಷದೊಳಗೇ ಅನಾಥ ಪ್ರಜ್ಞೆ ಕಾಡುತ್ತಾ ಇದೆ. ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಸಂಘಟನೆ ಹುಟ್ಟು ಹಾಕಿದ್ದಾರೆ ಅಷ್ಟೇ. ಅದರ ಹಿಂದೆ ಪ್ರಾಮಾಣಿಕ ಉದ್ದೇಶಗಳೇನೂ ಇಲ್ಲ. ಆ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೇನೋ ಗಂಡಾಂತರ ಅಂದುಕೊಳ್ಳುವ ಪರಿಸ್ಥಿತಿ ಏನಿಲ್ಲ ಎಂದು ವ್ಯಂಗ್ಯವಾಡಿದರು.[ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ : ಈಶ್ವರಪ್ಪ]
ರಾಜದ್ರೋಹದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಘೋಷಣೆ ಕೂಗಿದರೆ ಅದು ದೇಶದ್ರೋಹವೋ ರಾಜದ್ರೋಹವೋ ಆಗುವುದಿಲ್ಲ. ಅದಕ್ಕೂ ಹೆಚ್ಚಾಗಿ ಅಮ್ನೆಸ್ಟಿ ಸಂಸ್ಥೆ ಅಂಥ ಘೋಷಣೆ ಕೂಗಿಲ್ಲ. ರಾಜದ್ರೋಹ ಎಂದು ಪರಿಗಣಿಸಬೇಕಾದರೆ ಬೇರೆ-ಬೇರೆ ಮಾನದಂಡಗಳಿವೆ ಎಂದರು.[ವರ್ಷಪೂರ್ತಿ ಜೋಗ ವೈಭವ : ಏನಿದು ಯೋಜನೆ?]
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸತತವಾಗಿ ಸೋಲುಗಳು ಎದುರಾಗಿವೆ. ಅವರ ಲೆಕ್ಕಾಚಾರಗಳು ಉಲ್ಟಾ ಹೊಡೆಯುತ್ತಿವೆ. ದೆಹಲಿಯಲ್ಲಿ ಮೊದಲು ಸೋಲಿನ ರುಚಿ ಕಂಡ ಮೇಲೆ ಬಿಹಾರದಲ್ಲಿ ಸರಿಯಾದ ಹೊಡೆತ ಬಿದ್ದಿದೆ. ಅಸ್ಸಾಂನಲ್ಲಿ ನಮ್ಮ ತಪ್ಪಿನಿಂದ ಅಧಿಕಾರ ಕಳೆದುಕೊಂಡೆವು. ಪುನಃ ಅದನ್ನು ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.