ತೀರ್ಥಹಳ್ಳಿ ರಾಮೇಶ್ವರ ದೇಗುಲದ ಅದ್ಧೂರಿ ತೆಪ್ಪೋತ್ಸವ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಾಮೇಶ್ವರ ಜಾತ್ರೆ ಅಂದರೆ ಬಹಳ ಹೆಸರುವಾಸಿ. ಶನಿವಾರ ತೆಪ್ಪೋತ್ಸವದೊಂದಿಗೆ ಜಾತ್ರೆಗೆ ತೆರೆ ಬಿದ್ದಿದೆ. ಇನ್ನೇನು ಸಂಕ್ರಾಂತಿಗೆ ಕೂಡ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ತೀರ್ಥಹಳ್ಳಿ, ಜನವರಿ 1: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಪ್ರಸಿದ್ಧವಾದ ರಾಮೇಶ್ವರ ದೇವಸ್ಥಾನದ ತೆಪ್ಪೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು. ಎಳ್ಳಮಾವಾಸ್ಯೆಯಿಂದ ಆರಂಭಗೊಂಡು ದೇವರ ರಥೋತ್ಸವ ಹಾಗೂ ತೆಪ್ಪೋತ್ಸವ ಹೀಗೆ ಮೂರು ದಿನಗಳ ಕಾರ್ಯಕ್ರಮ ಶನಿವಾರಕ್ಕೆ ಮುಕ್ತಾಯವಾಯಿತು. ಇನ್ನು ಈ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಎಳ್ಳಮಾವಾಸ್ಯೆಯಂದು ಬೆಳಗಿನ ಜಾವ ದೇವರ ಉತ್ಸವಮೂರ್ತಿಗೆ ರಾಮಕೊಂಡದಲ್ಲಿ ಮಜ್ಜನ ಮಾಡಿಸಲಾಗುತ್ತದೆ. ಆ ನಂತರ ನೆರೆದಿದ್ದ ಭಕ್ತರೆಲ್ಲ ಹೊಳೆಯೆಲ್ಲ ಸ್ನಾನ ಮಾಡುತ್ತಾರೆ. ಗೊತ್ತಿದ್ದೋ-ಗೊತ್ತಿಲ್ಲದೆಯೋ ತಾಯಿಗೆ ಹೊಡೆದು-ಬಡಿದು ಮಾಡಿದ್ದಲ್ಲಿ ರಾಮಕೊಂಡದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ ಎಂಬುದು ನಂಬಿಕೆ.[ಡಿಸೆಂಬರ್ 1ರಿಂದ 31ರವರೆಗೆ ಆಗುಂಬೆ ಘಾಟಿ ರಸ್ತೆ ಸಂಚಾರ ಬಂದ್]
ಪರಶುರಾಮ ತನ್ನ ತಾಯಿಯನ್ನು ಕೊಂದ ಪಾಪವು ಹೋಗಿದ್ದು ಇದೇ ಸ್ಥಳದಲ್ಲಿ ಎಂಬುದು ಸ್ಥಳೀಯರ ನಂಬಿಕೆ. ಆದ್ದರಿಂದ ಇಲ್ಲಿ ಸ್ನಾನ ಮಾಡಿದರೆ ತಾಯಿಗೆ ತೊಂದರೆ ನೀಡಿದ್ದಲ್ಲಿ, ಅದು ಗೊತ್ತಿದ್ದು ನೀಡಿದಂತಿರಬಹುದು. ಅಥವಾ ಬಾಲ್ಯಾವಸ್ಥೆಯಲ್ಲಿ ಗೊತ್ತಿಲ್ಲದೆ ನೀಡಿದ್ದಂತಿರಬಹುದು. ಅದು ನಿವಾರಣೆ ಆಗುತ್ತದೆ ಎಂಬ ಕಾರಣಕ್ಕೆ ಇಲ್ಲಿಗೆ ಬರುವವರಿದ್ದಾರೆ.
ಇನ್ನು ಕೊಂಡದಲ್ಲಿ ಸ್ನಾನ ಮಾಡಿದ ನಂತರ ದೇವರಿಗೆ ನಮಸ್ಕರಿಸಿ, ಹಣ್ಣು-ಕಾಯಿ ಮಾಡಿಸುತ್ತಾರೆ. ಮೂರು ದಿನ ನಡೆದ ಅನ್ನದಾನಕ್ಕೆ ಭಕ್ತರು ತಮ್ಮಿಂದಾದ ಸೇವೆ ಸಲ್ಲಿಸಿದರು. ನಂತರ ದೊಡ್ಡ ತೇರನ್ನು ಸುಮಾರು ಒಂದು ಕಿಲೋಮೀಟರ್ ದೂರ ಎಳೆದರು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಆರಗ ಸೀಮೆ, ಮುತ್ತೂರು, ಆಗುಂಬೆ, ಕೊಪ್ಪ ಇತರ ಸೀಮೆಗಳು, ಹಳ್ಳಿಗಳಿಂದ ಭಕ್ತರು ಭಾಗವಹಿಸಿದ್ದರು.
ಇನ್ನು ಮೂರನೇ ದಿನ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಇರಿಸಿ, ಸುತ್ತು ಬರಲಾಯಿತು. ಸಂಜೆ ರಥೋತ್ಸವ ಮಾಡಿ, ರಾತ್ರಿ ತೆಪ್ಪೋತ್ಸವ ನಡೆಯಿತು. ಈ ಭಾಗದಲ್ಲಿ ತುಂಬ ದೊಡ್ಡದಾದ ಈ ಜಾತ್ರೆಯಲ್ಲಿ ನೂರಕ್ಕೂ ಹೆಚ್ಚು ಅಂಗಡಿಗಳು ಇದ್ದವು. ಮಕ್ಕಳ ಆಟಿಕೆ ಸಾಮಾನು, ಐಸ್ ಕ್ರೀಮ್, ಬಟ್ಟೆ, ಪಾತ್ರೆ, ತೊಟ್ಟಿಲು ಅಂಗಡಿಗಳಿದ್ದವು. ದೋಸೆ ಮೇಳ ನಡೆಯಿತು.[ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']
ಅಂದಹಾಗೆ, ಈ ವರ್ಷ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುವ ಆಲೋಚನೆ ಇದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಕಳೆದ ಕೆಲ ವರ್ಷಗಳಿಂದಲೂ ಈ ಬಗ್ಗೆ ಮಾತುಕತೆ ನಡೆಯುತ್ತಿರುವುದರಿಂದ ಈ ವರ್ಷವೂ ಅನುಮಾನ ಅನ್ನುವವರು ಇರುವಂತೆಯೇ, ಈ ವರ್ಷ ದೇಗುಲ ಜೀರ್ಣೋದ್ಧಾರ ಖಂಡಿತಾ ಆಗುತ್ತದೆ ಎನ್ನುವವರೂ ಇದ್ದಾರೆ.