ಶಿವಮೊಗ್ಗ ಕನ್ನಡ ಶಾಲೆಯಲ್ಲಿ ಕುರ್ ಆನ್ ಬೋಧಿಸಿದರೆ ಶಿಕ್ಷಕಿ?
ಶಿವಮೊಗ್ಗ, ಜೂನ್ 30: ಇಲ್ಲಿನ ಆರ್.ಎಂ.ಎಲ್. ನಗರದಲ್ಲಿರುವ ವಿದ್ಯಾದೀಪ ಖಾಸಗಿ ಕನ್ನಡ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಕುರ್ ಆನ್ ಬೋಧನೆ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ಬಗ್ಗೆ ಜಿಲ್ಲೆಯ ವಿವಿಧ ಹಿಂದೂಪರ ಸಂಘಟನೆಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
6 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ಬಾಲಕ!
ಈ ಶಾಲೆಯಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದು, ಬಹುತೇಕ ಅನ್ಯಧರ್ಮೀಯ ಮಕ್ಕಳೇ ವ್ಯಾಸಂಗ ಮಾಡುತ್ತಾ ಇದ್ದಾರೆ. ಅದರೆ ಮುಸ್ಲಿಂ ಶಿಕ್ಷಕಿ ಒಬ್ಬರು ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಕುರ್ ಆನ್ ಬೋಧನೆ ಮಾಡುತ್ತಿರುವ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೆ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈ ಮಧ್ಯೆ ವಿದ್ಯಾದೀಪ ಶಾಲೆಯ ಪ್ರಿನ್ಸಿಪಾಲ್ ಆರತಿ ಜನಾರ್ದನ್ ಮಾತನಾಡಿ, ಕುರ್ ಆನ್ ಬೋಧಿಸಿಲ್ಲ. ಬದಲಾಗಿ ಎಲ್ಲ ಧರ್ಮದ ಶ್ಲೋಕವನ್ನು ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರದರ್ಶನ ಮಾಡಲು ತಾಲೀಮು ಮಾಡಲಾಗುತ್ತಿತ್ತು. ಭಾವೈಕ್ಯತೆ ದೃಷ್ಟಿಯಿಂದ ಎಲ್ಲಾ ಶ್ಲೋಕಗಳನ್ನು ಹೇಳಿಸಲಾಗಿತ್ತು ಎಂದಿದ್ದಾರೆ.
ಪರಿಸರ ದಿನಾಚರಣೆ ದಿನ ಸರ್ವಧರ್ಮ ಭಾವೈಕ್ಯತೆ ಸಾರುವ ಹಾಡನ್ನು ಕಲಿಸಿ ಪ್ರದರ್ಶನ ಮಾಡಲಾಗಿತ್ತು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆಂದು ತಾಲೀಮು ಮಾಡಿಸಿ, ಆ ವಿಡಿಯೋವನ್ನು ನಾನೇ ಪೋಷಕರಿಗೆ ಕಳುಹಿಸಿದ್ದೆ. ಆದರೆ ಯಾರೋ ಪೋಷಕರು ಕುರ್ ಆನ್ ಪದ್ಯದ ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.