ಶಿವಮೊಗ್ಗ: ನೆಲಕ್ಕುರುಳಿದ ಕುವೆಂಪು ರಸ್ತೆಯ ನೇರಳೆ ಮರ, ಪ್ರತಿಭಟನೆ
ಶಿವಮೊಗ್ಗ, ಅಕ್ಟೋಬರ್ 30: ಇಲ್ಲಿನ ಜಿಲ್ಲಾ ಪಂಚಾಯಿತಿ ಮುಂಭಾಗದ ಕುವೆಂಪು ರಸ್ತೆಯಲ್ಲಿರುವ ಮರಗಳ ಕಡಿತಲೆಯನ್ನು ಖಂಡಿಸಿ ನೂರಾರು ಪರಿಸರ ಪ್ರೇಮಿಗಳು ಭಾನುವಾರದಂದು ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪು ರಸ್ತೆಯಲ್ಲಿ ಇಕ್ಕೆಲಗಳಲ್ಲಿರುವ ಗಿಡಮರಗಳು ಈ ಭಾಗದ ಸೌಂದರ್ಯವನ್ನು ವೃದ್ಧಿಸುತ್ತಿವೆ. ನೂರಾರು ಪ್ರಯಾಣಿಕರು ಇಲ್ಲಿನ ಸುಂದರ ವಾತಾವರಣದಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಈ ಭಾಗದ ಎರಡು ಬದಿಗಳಲ್ಲಿ ಮರಗಳಿರುವುದರಿಂದಲೇ ನೂರಾರು ಪ್ರಯಾಣಿಕರು ಇಲ್ಲಿನ ರಸ್ತೆಯಲ್ಲಿಯೇ ದಿನಂಪ್ರತಿ ಸಂಚರಿಸುತ್ತಿದ್ದಾರೆ.
ಆದರೆ, ಅಭಿವೃದ್ಧಿಯ ನೆಪದಲ್ಲಿ ಗಟ್ಟಿಮುಟ್ಟಾದ ಮರಗಳನ್ನು ಕಡಿಯಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಸ್ಥಳಕ್ಕೆ ಧಾವಿಸಿ ಮರಕಡಿಯುವರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲೇ ಪ್ರತಿಭಟನೆ : ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನೂರಾರು ಪರಿಸರ ಪ್ರೇಮಿಗಳು ಬೃಹತ್ ನೇರಳೆ ಮರಗಳನ್ನು ಕಡಿಯುತ್ತಿದ್ದ ಜಾಗದಲ್ಲಿಯೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 9 ಗಂಟೆಯಿಂದ ಸಂಜೆವವರೆಗೂ ಪ್ರತಿಭಟನೆ ನಡೆಸಿದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆಯುಂಟಾಯಿತು.
ಸ್ಥಳಕ್ಕೆ ಧಾವಿಸಲು ಆಗ್ರಹ : ಹತ್ತಾರು ವರ್ಷಗಳಿಂದ ನೆರಳು ನೀಡುತ್ತಿರುವ ಗಟ್ಟಿಮುಟ್ಟಾದ ಮರಗಳನ್ನು ಕಡಿಯಲಾಗುತ್ತಿದೆ. ಇದು ಹೀಗೆ ಮುಂದುವರಿದರೇ ಇಲ್ಲಿನ ಜನತೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ.
ಹಾಗಾಗಿ ಮರಗಳನ್ನು ಕಡಿಯಲು ಅನುಮತಿ ನೀಡಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಧಾವಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಕಾರರು ಪಟ್ಟು ಹಿಡಿದರು.
ಶಿಸ್ತುಕ್ರಮಕ್ಕೆ ಒತ್ತಾಯ : ಸ್ಥಳ ಮಹಜರು ಮಾಡಿ ಮರಗಳ ಕಡಿತಲೆಗೆ ಒಪ್ಪಿಗೆ ಸೂಚಿಸಿದ ಎಸಿಎಫ್, ಆರ್ಎಫ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಹಾಗೂ ಮರಗಳ ಗುತ್ತಿಗೆದಾರನನ್ನು ಬಂಧಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ಕೆ.ವಿ.ವಸಂತಕುಮಾರ್, ನಾಗರಾಜ್ ಶೆಟ್ಟರ್, ಶಿವಮೊಗ್ಗ ನಂದನ್, ತ್ಯಾಗರಾಜ್, ಮಧುಸೂದನ್ ಮತ್ತಿತರರಿದ್ದರು.