ಶಿವಮೊಗ್ಗದಲ್ಲಿ ಖತರ್ನಾಕ್ ರೌಡಿ ಸೊನಾಟಾ ಆಸೀಫ್ ಮೇಲೆ ಫೈರಿಂಗ್
ಶಿವಮೊಗ್ಗ, ಜುಲೈ 15 : ಪೊಲೀಸರ ಮೇಲೆ ರಾಡ್ ನಿಂದ ಹಲ್ಲೆ ಮಾಡಲು ಯತ್ನಿಸಿದ ಸೊನಾಟಾ ಆಸೀಫ್ ಎಂಬ ರೌಡಿ ಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಆತ ಗಾಯಗೊಂಡಿದ್ದಾನೆ.
ಹೊನ್ನಾಳಿ ರಸ್ತೆಯ ಹೊಳಲೂರು ಬಳಿ ಈ ಘಟನೆ ನಡೆದಿದ್ದು, ಖತರ್ನಾಕ್ ರೌಡಿ ಎಂದೇ ಕುಖ್ಯಾತಿ ಪಡೆದಿರುವ ಸೊನಾಟಾ ಆಸೀಫ್ ಕಾಲಿಗೆ ತೀವ್ರ ಗಾಯವಾಗಿದೆ. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಿ, ಕಲ್ಲು ತೂರಿ ತಪ್ಪಿಸಿಕೊಳ್ಳುವಾಗ ಈ ಘಟನೆ ನಡೆದಿದೆ. ತುಂಗಾನಗರ ಎಸ್ ಐ ಗಿರೀಶ್ ಅವರು ಆಸೀಫ್ ಕಾಲಿಗೆ ಫೈರ್ ಮಾಡಿದ್ದಾರೆ.
ಸೊನಾಟಾ ಆಸೀಫ್ ತೂರಿದ ಕಲ್ಲು ಬಿದ್ದು ತುಂಗಾ ನಗರ ಠಾಣೆ ಪೇದೆ ಮರ್ದನ್ ಎಂಬುವರಿಗೆ ಗಾಯವಾಗಿದೆ. ಅವರನ್ನು ಕೂಡ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದವಾರ ನಡೆದಿದ್ದ ಉದ್ಯಮಿ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಆಸೀಫ್ ಗಾಗಿ ಪೊಲೀಸರು ಬಲೆ ಬೀಸಿದ್ದರು. ತಲೆ ಮರೆಸಿಕೊಂಡಿದ್ದ ಆಸೀಫ್ ನನ್ನು ಪತ್ತೆ ಹಚ್ಚಿದ ಡಿಸಿಬಿ ಪೊಲೀಸರು ಕಡೆಗೂ ಆಸೀಫ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.