ಹೊನ್ನಾವರದಲ್ಲಿ ಡಿ.18ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಶಿವಮೊಗ್ಗ, ಡಿಸೆಂಬರ್. 13 : 'ಪರೇಶ್ ಮೇಸ್ತ್ ಕೊಲೆ ಖಂಡಿಸಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಸ್ಲಿಂ ಸಂಘಟನೆಗಳ ಪರ ಮೃದು ಧೋರಣೆ ಖಂಡಿಸಿ ಹೊನ್ನಾವರದಲ್ಲಿ ಡಿ.18ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ, 'ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ 20ಹಿಂದೂ ಯುವಕರ ಕೊಲೆಯಾಗಿದೆ. ಇದುವರೆಗೂ ಸಿದ್ದರಾಮಯ್ಯ ತಪ್ಪಿತಸ್ಥರನ್ನು ಬಂಧಿಸುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡುತ್ತಿಲ್ಲ' ಎಂದು ಆರೋಪಿಸಿದರು.
ಹೊತ್ತಿ ಉರಿದ ಶಿರಸಿ : ಇಂದಿನ ಪ್ರಮುಖ ಬೆಳವಣಿಗೆಗಳು
'ಬೆಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ರುದ್ರೇಶ್, ಮಂಗಳೂರಿನಲ್ಲಿ ಶರತ್ ಮಡಿವಾಳ, ಈಗ ಪರೇಶ್ ಮೇಸ್ತ್ ಕೊಲೆಯಾಗಿದೆ. ಸಿದ್ದರಾಮಯ್ಯ ಪ್ರತಿ ಬಾರಿಯೂ ರಾಷ್ಟ್ರದ್ರೋಹಿ ಮುಸ್ಲಿಂ ಸಂಘಟನೆ ಪರ ನಿಲ್ಲುತ್ತಾರೆ' ಎಂದು ದೂರಿದರು.
ಎರಡು ದಿನ ಬಂದ್ ಬಳಿಕ ಸಹಜ ಸ್ಥಿತಿಯತ್ತ ಉತ್ತರ ಕನ್ನಡ
'ಕೊಲೆ ಮಾಡಿದವರನ್ನು ಬಂಧಿಸಿ, ಜೈಲಿಗೆ ಕಳುಹಿಸುವ ಬದಲು ಕೊಲೆಗಡುಕರನ್ನು ಓಲೈಸುವ ಪ್ರಯತ್ನದಲ್ಲಿ ಸಿದ್ದರಾಮಯ್ಯ ಮುಳುಗಿದ್ದಾರೆ. ಪರೇಶ್ ಮೇಸ್ತ್ ಕೊಲೆ ಪ್ರಕರಣವನ್ನು ಎನ್ಐಎಗೆ ಅಥವಾ ಸಿಬಿಐಗೆ ವಹಿಸಿ' ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪರೇಶ್ ಮೇಸ್ತ: ಡಿ. 13, 14ರಂದು ರಾಜ್ಯಾದ್ಯಂತ ವಿಎಚ್ಪಿ ಪ್ರತಿಭಟನೆ
'ಪರೇಶ್ ಮೇಸ್ತ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆತನ ತಂದೆ-ತಾಯಿ ಒಪ್ಪಿಕೊಳ್ಳುತ್ತಾರೆ. ಆದರೆ, ಪೋಲೀಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಇದು ಕೊಲೆ ಅಲ್ಲ ಎನ್ನುತ್ತಿದ್ದಾರೆ. ಇವರ ಮಾತಿನ ಮೂಲಕ ಸಿದ್ದರಾಮಯ್ಯ ಮುಸ್ಲಿಂ ಸಂಘಟನೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ' ಎಂದರು.
'ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ದಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ' ಎಂದು ಗಂಭೀರ ಆರೋಪ ಮಾಡಿದರು.
'ಮೇಸ್ತ್ ಅವರ ಕೈಗಳಲ್ಲಿ ಶಿವಾಜಿ ಟ್ಯಾಟೋ ಇತ್ತು. ಆತನ ಚರ್ಮ ಸುಲಿದು ಕೊಲೆ ಮಾಡಲಾಗಿದೆ ಎಂದು ಆತನ ತಂದೆ-ತಾಯಿ ಹೇಳುತ್ತಾರೆ. ಹೋಗಲಿ ಒಂದು ಕೊಲೆಯಾಗಿದೆ ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಿಲ್ಲ' ಎಂದರು.