ಭದ್ರಾವತಿಯ ವಿಐಎಸ್ಎಲ್ಗೆ ಮುಚ್ಚುವ ಭೀತಿ ಇಲ್ಲ
ಶಿವಮೊಗ್ಗ, ಆಗಸ್ಟ್ 04 : 'ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮುಚ್ಚುವ ಅಥವ ಖಾಸಗೀಕರಣಗೊಳಿಸುವ ಉದ್ದೇಶ ಕೇಂದ್ರ ಸರ್ಕಾರದ ಮುಂದಿಲ್ಲ' ಎಂದು ಸಚಿವ ಬಿರೇಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮುಂತಾದ ಬಿಜೆಪಿ ನಾಯಕರ ನಿಯೋಗ ಬುಧವಾರ ಕೇಂದ್ರ ಕಬ್ಬಿಣ ಮತ್ತು ಉಕ್ಕು ಖಾತೆ ಸಚಿವ ಚೌದರಿ ಬಿರೇಂದರ್ ಸಿಂಗ್ ಅವರನ್ನು ಭೇಟಿ ಮಾಡಿತ್ತು.[ಭದ್ರಾವತಿಯ ಜನಪ್ರಿಯ 'ಶಿಕ್ಷಕ' ಅಪಘಾತದಲ್ಲಿ ನಿಧನ]
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನೌಕರರ ಸಂಘದವರು ನಿಯೋಗದೊಂದಿಗೆ ಸಚಿವರನ್ನು ಭೇಟಿ ಮಾಡಿ, ಕಾರ್ಖಾನೆಯನ್ನು ಮುಚ್ಚಬಾರದು ಎಂದು ಮನವಿ ಮಾಡಿದರು. ನಿಯೋಗದ ಜೊತೆ ಮಾತನಾಡಿದ ಸಚಿವರು, 'ಕಾರ್ಖಾನೆಯನ್ನು ಮುಚ್ಚುವ ಅಥವ ಖಾಸಗೀಕರಣಗೊಳಿಸುವ ಉದ್ದೇಶವಿಲ್ಲ' ಎಂದು ಸ್ಪಷ್ಟಪಡಿಸಿದರು.[ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್!]
ಕರ್ನಾಟಕ ಸರ್ಕಾರ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಸಮೀಪದ ರಾಮದುರ್ಗ ವ್ಯಾಪ್ತಿಯಲ್ಲಿ 255 ಎಕರೆಯಲ್ಲಿ ಸ್ವಂತ ಗಣಿಗಾರಿಕೆಗೆ ಅವಕಾಶ ನೀಡಿದೆ. ಗಣಿಗಾರಿಕೆ ಆರಂಭವಾದರೆ ಕಚ್ಚಾ ವಸ್ತುಗಳ ಕೊರತೆ ಉಂಟಾಗುವುದಿಲ್ಲ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.[ಗಣಿಗಾರಿಕೆ ಆರಂಭಕ್ಕೆ ಸಿದ್ದರಾಮಯ್ಯ ಸರ್ಕಾರ ಚಿಂತನೆ]
2015ರಲ್ಲಿ ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಂಪುಟದರ್ಜೆ ಸಚಿವರಾದ ನರೇಂದ್ರಸಿಂಗ್ ತೋಮರ್ ಅವರು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿದ್ದರು. ಕಾರ್ಖನೆ ಪುನಶ್ಚೇತನಕ್ಕೆ 868 ಕೋಟಿ ರೂ.ಗಳ ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿದ್ದರು.
ಕರ್ನಾಟಕ ಸರ್ಕಾರ ಗಣಿಗಾರಿಕೆಗೆ ಮಂಜೂರಾತಿ ನೀಡಿದರೆ, ಭಾರತೀಯ ಉಕ್ಕು ಪ್ರಾಧಿಕಾರ ಕಾರ್ಖನೆಯಲ್ಲಿ 2000 ಕೋಟಿ ಬಂಡವಾಳ ಹೂಡುವುದಾಗಿ ಕಳೆದ ವರ್ಷ ಪ್ರಕಟಿಸಿತ್ತು. ಈಗ ಸರ್ಕಾರದ ಒಪ್ಪಿಗೆ ಸಿಕ್ಕಿರುವುದರಿಂದ ಕಾರ್ಖನೆ ಲಾಭದ ಹಳಿಗೆ ಮರಳುವ ಸಾಧ್ಯತೆ ಇದೆ.