ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರಕ್ಕೆ ಒಲಿಯದ ಸಚಿವ ಸ್ಥಾನ!
ಶಿವಮೊಗ್ಗ, ಡಿಸೆಂಬರ್ 24: ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ಶಿವಮೊಗ್ಗ ಜಿಲ್ಲೆ ಶಕ್ತಿಕೇಂದ್ರವಾಗಿದೆ. ಈ ಜಿಲ್ಲೆಯಿಂದ ನಾಲ್ವರು ಮುಖ್ಯಮಂತ್ರಿಯಾಗಿದ್ದಾರೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಶಿವಮೊಗ್ಗ ಜಿಲ್ಲೆಯಿಂದ ಕನಿಷ್ಟ ಒಬ್ಬರಾದರೂ ಸಚಿವರಾಗುತ್ತಾರೆ. ಆದರೆ ಈ ಬಾರಿ ಮಾತ್ರ ಸಮ್ಮಿಶ್ರ ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಯಾವೊಬ್ಬ ಸಚಿವರೂ ಇಲ್ಲದಂತಾಗಿದೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ, ಜಿಲ್ಲಾ ಮತ್ತು ಜಾತಿ ಪ್ರಾತಿನಿಧ್ಯ
ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಗೆ ಸಚಿವರಾಗುವ ಅವಕಾಶವಿದ್ದರೂ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿ ಹೋಗಿದೆ. ಈ ಮೂಲಕ ಸಚಿವ ಸ್ಥಾನವೇ ಸಿಗದ ಕ್ಷೇತ್ರವಾಗಿದೆ ಭದ್ರಾವತಿ. ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು ಇದುವರೆಗೆ ಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.
ಎಂಬಿ ಪಾಟೀಲ್ ಸೇರಿ 8 ಮಂದಿ ಸಚಿವರ ಕಿರು ಪರಿಚಯ
ಆದರೆ ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಭದ್ರಾವತಿ ಕ್ಷೇತ್ರಕ್ಕೆ ಮಾತ್ರ ಇನ್ನೂ ಮಂತ್ರಿಸ್ಥಾನ ಸಿಕ್ಕಿಲ್ಲ. ಪ್ರಸ್ತುತ ಭದ್ರಾವತಿ ಶಾಸಕರಾಗಿರುವ ಬಿ.ಕೆ.ಸಂಗಮೇಶ್ ಮೂರು ಬಾರಿ ಶಾಸಕರಾಗಿದ್ದಾರೆ. ಆದರೆ ಇವರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸರ್ಕಾರ ರಚನೆ ವೇಳೆ ಹಾಗೂ ಸಚಿವ ಸಂಪುಟ ವಿಸ್ತರಣೆ ವೇಳೆ ಸಂಗಮೇಶ್ ಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿರುತ್ತದೆ.
ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ
ಆದರೆ ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈತಪ್ಪಿ ಹೋಗಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಾದರೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಂಗಮೇಶ್ ಗೆ ಮತ್ತೆ ನಿರಾಸೆಯಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿ.ಕೆ.ಸಂಗಮೇಶ್ ಗೆ ಭೂ ಸೇನಾ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸುಮ್ಮನಿರಿಸಲಾಗಿದೆ.
ಮುಂದಿನ ದಿನದಲ್ಲಾದರೂ ಹಿರಿಯ ಶಾಸಕರಾದ ಬಿ.ಕೆ.ಸಂಗಮೇಶ್ ಗೆ ಸಚಿವ ಸ್ಥಾನ ನೀಡುವ ಮೂಲಕ ಸಚಿವ ಸ್ಥಾನದ ಭಾಗ್ಯ ಸಿಗದ ಕ್ಷೇತ್ರ ಎಂಬ ಪಾತ್ರಕ್ಕೆ ಒಳಗಾಗಿರುವ ಭದ್ರಾವತಿಗೆ ನ್ಯಾಯ ಸಿಗುತ್ತದೆಯೇ ಎಂದು ಕಾದುನೋಡಬೇಕಿದೆ.