70 ರಿಂದ 100 ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಗಳ ಸ್ಪರ್ಧೆ
ಶಿವಮೊಗ್ಗ, ಜನವರಿ 29 : '2018ರ ಚುನಾವಣೆಯಲ್ಲಿ ಜೆಡಿಯು ಪಕ್ಷದ ಅಭ್ಯರ್ಥಿಗಳು 70 ರಿಂದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ' ಎಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ಶಿವಮೊಗ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮಹಿಮಾ ಪಟೇಲ್, 'ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಮತ್ತು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಲಾಗಿದೆ' ಎಂದರು.
ಬಿಹಾರದಂತೆ ಕರ್ನಾಟಕದಲ್ಲೂ ಜೆ.ಡಿ.ಯು ವಿಭಜನೆ
'ರಾಜ್ಯದಲ್ಲಿ ಪ್ರಜ್ಞಾವಂತ ರಾಜಕಾರಣ ಮಾಡುವ ನಿಟ್ಟಿನಲ್ಲಿ ಜೆಡಿಯು ಪಕ್ಷ ಕೆಲಸ ಮಾಡಲಿದೆ. ಇನ್ನೊಬ್ಬರನ್ನು ದೂರುವುದನ್ನು ಬಿಟ್ಟು ಕೇವಲ ಅಭಿವೃದ್ಧಿ ಬಗ್ಗೆ ಮಾತನಾಡಲಿದ್ದೇವೆ' ಎಂದು ಹೇಳಿದರು.
'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯದಲ್ಲಿ ಜೆಡಿಯು ಸಂಘಟನೆಯ ಜವಾಬ್ದಾರಿ ಹೊತ್ತಿದ್ದೇನೆ. ರಾಜ್ಯದಲ್ಲಿ ಪಕ್ಷ ಬೆಳೆಸಲು ಸಂಪೂರ್ಣ ಸ್ವಾತಂತ್ರವನ್ನು ಅವರು ನೀಡಿದ್ದಾರೆ' ಎಂದು ತಿಳಿಸಿದರು.
ಜೆಎಚ್ ಪಟೇಲರ ಪುತ್ರ ಮಹಿಮಾ ಈಗ ಜೆಡಿಯು ಅಧ್ಯಕ್ಷ
'ನಮ್ಮೊಂದಿಗೆ ವಿಜ್ಞಾನಿಗಳ ಮತ್ತು ತಂತ್ರಜ್ಞರ ತಂಡವಿದೆ. ಈ ತಂಡದ ಮೂಲಕ ಆಯಾ ಕ್ಷೇತ್ರಗಳಿಗೆ ಬೇಕಾದ ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರದ ಮೂಲಕ ಅದನ್ನು ಜಾರಿ ಮಾಡಿಸಲು ಪ್ರಯತ್ನಿಸಲಾಗುವುದು' ಎಂದರು.
'ಕೇವಲ ಅಧಿಕಾರ ಹಿಡಿಯುವುದೇ ನಮ್ಮ ಕೆಲಸವಲ್ಲ. ಜನರಿಗೆ ಶುದ್ಧ ಗಾಳಿ, ನೀರು, ಆಹಾರ, ಗ್ರಾಮೀಣರಿಗೆ ಉದ್ಯೋಗ ಹೀಗೆ ಮೂಲಭೂತ ಬೇಡಿಕೆಗಳ ಒದಗಿಸುವತ್ತ ಚಿಂತನೆ ನಡೆಸಲಾಗುವುದು' ಎಂದು ಹೇಳಿದರು.
'ಈ ಹಿಂದಿನಂತೆ ಹಣ, ಹೆಂಡ ಹಂಚಿ ಚುನಾವಣೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಚುನಾವಣಾ ಆಯೋಗ ನಿಗದಿಪಡಿಸಿದ 28ಲಕ್ಷ ವೆಚ್ಚದ ಮಿತಿಯಲ್ಲಿ ಚುನಾವಣೆ ಮಾಡುತ್ತೇವೆ. ಕೆಲಸ ಮಾಡುವ ಭರವಸೆ ಮೂಡಿಸಿ ಜನರ ಮತ ಪಡೆಯುತ್ತೇವೆ' ಎಂದರು.
'ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಲಿದ್ದೇವೆ. ಅಲ್ಲಿನ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನನಗೆ ಆತ್ಮೀಯರು, ಚುನಾವಣೆಗಾಗಿ ಅವರನ್ನು ದೂರುವುದಿಲ್ಲ. ಮನೆ ಮನೆಗೆ ಹೋಗಿ ಮತ ಕೇಳುತ್ತೇನೆ' ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಚಾಲಕ ಸೋಮಶೇಖರ್, ಪ್ರಮುಖರಾದ ಜಯಪ್ರಕಾಶ್, ಲೋಕಪಾಲ್ ಜೈನ್, ನವೀನ ದಳವಾಯಿ, ತ್ಯಾಜವಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.