ಉಪ ಚುನಾವಣೆ ಮುಗಿಯುತ್ತಲೇ ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ!
ಶಿವಮೊಗ್ಗ, ನವೆಂಬರ್ 05 : "ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರ ಉಳಿಸಬಹುದು, ಹಾಗೆಯೇ ಕೆಡವಬಹುದು. ಆದರೆ, ಮನಸ್ಸುಗಳನ್ನು ಕಟ್ಟಲು ಆಗುವುದಿಲ್ಲ" ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ವಾಗ್ದಾಳಿ ಮಾಡಿದ್ದಾರೆ.
ಸೋಮವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಾನುಪ್ರಕಾಶ್ ಅವರು, ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ಕಾರ್ಯ ವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಇತರ ನಾಯಕರ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮುಗಿಯುತ್ತಿದ್ದಂತೆ ಯಡಿಯೂರಪ್ಪ ತವರು ಜಿಲ್ಲೆಯ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದು ಏಕೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ. ಭಾನುಪ್ರಕಾಶ್ ಪರಿಷತ್ ಸದಸ್ಯರಾಗಲು ಬಯಸಿದ್ದರು. ಆದರೆ, ಯಡಿಯೂರಪ್ಪ ಅವರು ತಮ್ಮ ಆಪ್ತ ರುದ್ರೇಗೌಡರನ್ನು ಆಯ್ಕೆ ಮಾಡಿದ್ದರು.
ಶಿವಮೊಗ್ಗದಲ್ಲಿ ಬಿಜೆಪಿಗೆ ಜಯ, ಸರ್ಕಾರ ಉಳಿಯೋಲ್ಲ : ಯಡಿಯೂರಪ್ಪ
'ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಪರವಾಗಿ ಕೆಲಸ ಮಾಡಿದ್ದೇನೆ. ರಾಘವೇಂದ್ರ ಅವರು ಗೆಲ್ಲಬೇಕು ಎಂಬ ಹಂಬಲ ನನಗೂ ಇದೆ. ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ' ಎಂದು ಭಾನುಪ್ರಕಾಶ್ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಜೊತೆ ರಾಹು, ಕೇತು, ಶನಿ ಪ್ರಚಾರ: ಈಶ್ವರಪ್ಪ ಲೇವಡಿ
ಉಪಾಧ್ಯಕ್ಷ ಸ್ಥಾನ ಒಪ್ಪಿಕೊಂಡಿಲ್ಲ
'ಇದ್ದಕ್ಕಿದ್ದಂತೆ ಒಂದೂವರೆ ವರ್ಷದ ಹಿಂದೆ ನನ್ನನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಯಿತು. ಇದೀಗ ಚುನಾವಣೆ ಬರುತ್ತಿದ್ದಂತೆ ಏಕಾಏಕಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೀಗಾಗಿ ನಾನು ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿಲ್ಲ' ಎಂದು ಎಂ.ಬಿ.ಭಾನುಪ್ರಕಾಶ್ ಹೇಳಿದರು.
ಸಾಮಾನ್ಯ ಕಾರ್ಯಕರ್ತ
'ನನ್ನ ಸೈದ್ದಾಂತಿಕ ನಿಲುವು ಮತ್ತು ನನ್ನ ಮನಸಾಕ್ಷಿ ಒಪ್ಪುವುದಿಲ್ಲ. ಆದ ಕಾರಣ ನಾನು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಇನ್ನೂ ಒಪ್ಪಿಕೊಂಡಿಲ್ಲ. ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ' ಎಂದು ಎಂ.ಬಿ.ಭಾನುಪ್ರಕಾಶ್ ಹೇಳಿದರು.
ಮನಸ್ಸುಗಳನ್ನು ಕಟ್ಟಲು ಆಗೋಲ್ಲ
ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾನುಪ್ರಕಾಶ್ ಅವರು, 'ಬಿ.ಎಸ್.ಯಡಿಯೂರಪ್ಪ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂತ್ರಗಾರಿಕೆಯಿಂದ ಚುನಾವಣೆ ಗೆಲ್ಲಬಹುದು. ಸರ್ಕಾರವನ್ನು ಉಳಿಸಬಹುದು ಹಾಗೆಯೇ ಕೆಡವಬಹುದು. ಆದರೆ, ಮನಸ್ಸುಗಳನ್ನು ಕಟ್ಟಲು ಆಗುವುದಿಲ್ಲ' ಎಂದು ಹೇಳಿದರು.
ಕೆಟ್ಟವರನ್ನಾಗಿ ಮಾಡಿದ್ದಾರೆ
'ನಾನು 35 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ. ಆದರೆ, ಎಲ್ಲಿಯೂ ಲೆಟರ್ ಸಂಸ್ಕೃತಿ ಇರಲಿಲ್ಲ. ಈಗ ಲೆಟರ್ ಸಂಸ್ಕೃತಿ ತಂದಿದ್ದಾರೆ. ಕೆಜೆಪಿಯಿಂದ ಬಂದ ಯಡಿಯೂರಪ್ಪ ಅವರನ್ನು ಒಪ್ಪಿಕೊಂಡಿದ್ದೆವು. ಯಡಿಯೂರಪ್ಪ ಅವರಿಗೆ ಅವರ ವರ್ತನೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದೆವು. ಸಲಹೆ ನೀಡಿದವರನ್ನು ಕೆಟ್ಟವರಾಗಿ ಮಾಡಿದ್ದಾರೆ' ಎಂದು ಭಾನುಪ್ರಕಾಶ್ ದೂರಿದರು.
ಸ್ಥಾನಮಾನ ನೀಡಿಲ್ಲ
'ಪಕ್ಷಕ್ಕೆ ಹೊಸಬರನ್ನು ಕರೆದುಕೊಂಡು ಬರುವ ಜೊತೆಗೆ ನಮ್ಮ ಪಕ್ಷದಲ್ಲೇ ಹತ್ತಾರು ವರ್ಷ ಕೆಲಸ ಮಾಡಿ ಪಕ್ಷದಿಂದ ಹೊರಗಿರುವವರನ್ನು ಮೊದಲು ಪಕ್ಷಕ್ಕೆ ಕರೆತರಬೇಕು. ಸೊಗಡು ಶಿವಣ್ಣ, ಶಿವಯೋಗಿ ಸ್ವಾಮಿ, ಗಿರೀಶ್ ಪಟೇಲ್ ಸೇರಿದಂತೆ ಹಲವರಿಗೆ ಪಕ್ಷದಲ್ಲಿ ಸೂಕ್ತಸ್ಥಾನ-ಮಾನ ನೀಡದೆ ಅನ್ಯಾಯ ಮಾಡಲಾಗಿದೆ' ಎಂದು ಭಾನುಪ್ರಕಾಶ್ ಆರೋಪ ಮಾಡಿದರು.