ಶಿವಮೊಗ್ಗ: ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಘೋಷಣೆ
ಶಿವಮೊಗ್ಗ, ಅಕ್ಟೋಬರ್ 14: ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಒಮ್ಮತ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಕಣಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.
ವಿಜಯಪುರ ಜಿಲ್ಲೆ ಪ್ರವಾಸದಲ್ಲಿದ್ದಾಗ ದೇವೇಗೌಡರು, ಮಧು ಒಪ್ಪದಿದ್ದರೆ ಕಾಂಗ್ರೆಸ್ ಜತೆ ಚರ್ಚಿಸಿ ಬೇರೆ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಆಗ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು. ಈಗ ಪ್ಯಾರೀಸ್ ಪ್ರವಾಸದಿಂದ ಮರಳಿರುವ ಮಧು ಅವರು ಚುನಾವಣೆ ಕಣಕ್ಕಿಳಿಯಲು ಒಪ್ಪಿಗೆ ಸೂಚಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಈಗ ಎಲ್ಲಿದ್ದಾರೆ?
ಜೆಡಿಎಸ್ ನಿಂದ ಕಳೆದ ಬಾರಿ ಚುನಾವಣೆ ಸ್ಪರ್ಧಿಸಿ ಸೋಲು ಕಂಡಿದ್ದ ಗೀತಾ ಶಿವರಾಜ್ ಕುಮಾರ್ ಹಾಗೂ ಅವರ ಸೋದರ ಮಧು ಬಂಗಾರಪ್ಪ ಇಬ್ಬರಿಗೂ ಈ ಬಾರಿ ಸ್ಪರ್ಧಿಸುವ ಅವಕಾಶ ಒದಗಿ ಬಂದಿತ್ತು. ಆದರೆ, ಇಬ್ಬರೂ ಕೂಡಾ ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಮಧು ಅವರು ಬಹುತೇಕ ಸ್ಪರ್ಧಿಸುವುದಿಲ್ಲ. ಅತ್ತ ಕಾಂಗ್ರೆಸ್ ನಲ್ಲೂ ಪ್ರಮುಖ ಸ್ಪರ್ಧಿ ಇನ್ನೂ ಸಿಕ್ಕಿಲ್ಲ. ಹೀಗಾಗಿ, ಮೈತ್ರಿಕೂಟಕ್ಕೆ ಅಭ್ಯರ್ಥಿ ಆಯ್ಕೆ ಇನ್ನೂ ಗೊಂದಲವಾಗಿತ್ತು. ಆದರೆ, ಈಗ ಮಧು ಅವರು ಸ್ಪರ್ಧಿಸಲು ಮುಂದಾಗಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ದೇವೇಗೌಡರ ಪ್ಲ್ಯಾನ್ ಬಿ ಏನಿತ್ತು?
ಪಕ್ಷದ ಮೂಲಗಳ ಪ್ರಕಾರ ಮಧು ಬರುವುದು ವಿಳಂಬವಾದರೆ ಅಥವಾ ಚುನಾವಣೆ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರು ನಾಮಪತ್ರ ಸಲ್ಲಿಸುವರು ಎನ್ನಲಾಗಿತ್ತು. ಆದರೆ ಇಲ್ಲಿಯವರೆಗೆ ಗೀತಾ ಅವರು ಸ್ಪರ್ಧಿಸುವ ಕುರಿತಂತೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿತ್ತು. ಒಂದು ವೇಳೆ ಮಧು ಮತ್ತು ಗೀತಾ ಶಿವರಾಜ್ ಕುಮಾರ್ ಇಬ್ಬರೂ ಭಾಗವಹಿಸದಿದ್ದರೆ ಮೂರನೇ ಅಭ್ಯರ್ಥಿಯನ್ನು ಕೊನೇ ಕ್ಷಣದಲ್ಲಿ ಇಳಿಸಲು ಕೂಡಾ ಜೆಡಿಎಸ್ ಸಿದ್ಧವಾಗಿತ್ತು.
ಶಿವಮೊಗ್ಗ ಲೋಕಸಭಾ ಕ್ಷೇತ್ರ : ಅಭ್ಯರ್ಥಿ ಆಯ್ಕೆ ಬಗ್ಗೆ ಗೌಡ್ರ ಗೊಂದಲ
ಕಾಂಗ್ರೆಸ್ಸಿಗೆ ಅಭ್ಯರ್ಥಿ ಸಿಕ್ಕಿರಲಿಲ್ಲ
ಕಳೆದ ಬಾರಿ ಸ್ಪರ್ಧಿಸಿದ್ದ ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ರಾಜ್ಯ ವಕ್ತಾರ ಕೆ ದಿವಾಕರ್, ಜಿಲ್ಲಾಧ್ಯಕ್ಷ ಟಿ.ಎನ್ ಶ್ರೀನಿವಾಸ್ ಅಲ್ಲದೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ ಅವರ ಫ್ಯಾಮಿಲಿಗೂ ಟಿಕೆಟ್ ನೀಡುವ ಆಫರ್ ನೀಡಲಾಗಿದೆ. ಆದರೆ, ಯಾರೊಬ್ಬರೂ ಮುಂದಾಗಿರಲಿಲ್ಲ.
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದರು. ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಮತ್ತು ಸುಂದರೇಶ್ ಸ್ಪರ್ಧಿಸಲು ಒಲವು ತೋರಿರಲಿಲ್ಲ. ಹಾಗಾಗಿ ಶಿವಮೊಗ್ಗವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ತೀರ್ಮಾನಿಸಬೇಕಾಯಿತು.
ಶಿವಮೊಗ್ಗ ಲೋಕಸಭೆ ಉಪಚುನಾವಣೆ: ಟಿಕೆಟ್ ಗೊಂದಲಕ್ಕೆ ತೆರೆ ಎಳೆದ ಈಶ್ವರ್ ಖಂಡ್ರೆ
ಬಿವೈ ರಾಘವೇಂದ್ರ ಸ್ಪರ್ಧೆ
ಬಿ.ಎಸ್.ಯಡಿಯೂರಪ್ಪ ಅವರು ಬಿ.ವೈ.ರಾಘವೇಂದ್ರ ಹೆಸರು ಘೋಷಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಎಂ.ಬಿ.ಭಾನುಪ್ರಕಾಶ್, ದತ್ತಾತ್ರಿ ಸೇರಿದಂತೆ ಹಲವು ನಾಯಕರು ಆಕಾಂಕ್ಷಿಗಳಾಗಿದ್ದರು. ಆದರೆ, ನಂತರ ಒಮ್ಮತ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಬಿ.ವೈ.ರಾಘವೇಂದ್ರ ಅವರು 2009-2014ರ ತನಕ ಶಿವಮೊಗ್ಗ ಸಂಸದರಾಗಿದ್ದರು. ಸತತ ಎರಡು ಚುನಾವಣೆಗಳನ್ನು ಎದುರಿಸಿದ ಅನುಭವ ಅವರಿಗೆ ಇದೆ. ಸುಮಾರು 10 ವರ್ಷಗಳಿಂದ ಕ್ಷೇತ್ರದ ಮೇಲೆ ಅವರ ಕುಟುಂಬವೇ ಹಿಡಿತವನ್ನು ಹೊಂದಿದೆ. ನ.3ರಂದು ಉಪ ಚುನಾವಣೆ ನಡೆಯಲಿದ್ದು, 6ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆದ್ದವರ ಅಧಿಕಾರಾವಧಿ ಸುಮಾರು ನಾಲ್ಕು ತಿಂಗಳು. ಆದರೂ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ದವಾಗಬೇಕಿದೆ.
ಉಪಚುನಾವಣೆ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಖಚಿತ
ಕಾಂಗ್ರೆಸ್ಸಿಗೆ ಅನಿವಾರ್ಯ
2014ರ ಲೋಕಸಭೆ ಚುನಾವಣೆಯಲ್ಲಿ ಮಂಜುನಾಥ ಭಂಡಾರಿ ಅವರು ಬಿ.ಎಸ್.ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ 242911 ಮತಗಳನ್ನು ಪಡೆದಿದ್ದರು. ಆದರೆ, ಈಗ ಉಪ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲು ಒಪ್ಪಿಗೆ ಕೊಟ್ಟಿಲ್ಲ.
ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ ಅವರನ್ನು ಕಣಕ್ಕಿಳಿಸಲು ಪಕ್ಷ ಬಯಸಿತ್ತು. ಆದರೆ, ಉಭಯ ನಾಯಕರು ಸ್ಪರ್ಧೆಗೆ ಒಪ್ಪಿಗೆ ನೀಡಲಿಲ್ಲ. ಆದ್ದರಿಂದ, ಕಾಂಗ್ರೆಸ್ ಜೆಡಿಎಸ್ ಬೆಂಬಲಿಸುವ ನಿರ್ಧಾರವನ್ನು ಕೈಗೊಂಡಿತ್ತು. ಈ ಗೊಂದಲದಿಂದಾಗಿ ರಾಘವೇಂದ್ರ ಅವರಿಗೆ ಈ ಬಾರಿ ಗೆಲುವಿನ ಹಾದಿ ಸುಗುಮಗೊಳ್ಳುವ ಸಾಧ್ಯತೆ ಹೆಚ್ಚಿದೆ.