ಸಿದ್ದರಾಮಯ್ಯಗೆ ಗೌರವ ಕೊಡದ ಕುಮಾರಸ್ವಾಮಿ: ಈಶ್ವರಪ್ಪ ಟೀಕೆ
Recommended Video
ಶಿವಮೊಗ್ಗ, ಜುಲೈ 07: ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೂ ಗೌರವ ಕೊಡದ ಕುಮಾರಸ್ವಾಮಿ ತಮ್ಮ ಮೂಗಿನ ನೇರಕ್ಕೆ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಬಾದಾಮಿಗೆ ಅನುದಾನ ನೀಡುವಂತೆ ಬಜೆಟ್ಗೂ ಹಿಂದೆ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು ಆದರೆ ಅವರ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಅವರು ಹೇಳಿದರು.
ಎಚ್ಡಿಕೆ ಬಜೆಟ್ ಬಗ್ಗೆ ನಾಯಕರು ಹೀಗಂದರು, ಓದುಗರು ನೀವೇನಂತೀರಿ?
ಸಮನ್ವಯ ಸಮಿತಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿಗಳ ಮನವಿಗೇ ಕುಮಾರಸ್ವಾಮಿ ಸ್ಪಂದಿಸಲಿಲ್ಲವೆಂದರೆ ಜನರ ಸಾಮಾನ್ಯ ಶಾಸಕರ ಅದರಲ್ಲಿಯೂ ವಿರೋಧ ಪಕ್ಷದ ಶಾಸಕರ ಮನವಿಗೆ ಎಲ್ಲಿ ಮನ್ನಣೆ ದೊರೆಯಲಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಾಲಮನ್ನಾ ಬಗ್ಗೆ ಪ್ರಶ್ನೆ ಮಾಡಿದಾಗ ಕುಮಾರಸ್ವಾಮಿ ಅವರು ಆಕ್ರೋಶಗೊಳ್ಳುವುದು ಬಿಟ್ಟು ಸಮಾಧಾನವಾಗಿ ಉತ್ತರ ನೀಡಬೇಕು ಎಂದು ಸಲಹೆ ನೀಡಿದ ಅವರು, ನಾವು ಬಜೆಟ್ ಬಗ್ಗೆ ಕೇಳುತ್ತಿದ್ದೇವೆಯೇ ಹೊರತು ಅವರ ವೈಯಕ್ತಿಕ ವಿಚಾರ ಕೇಳುತ್ತಿಲ್ಲ ಎಂದು ಅವರು ಹೇಳಿದರು.